ಶ್ರೀರಂಗಪಟ್ಟಣ: ‘ಕರ್ನಾಟಕದ ಹಿರಿಮೆಯನ್ನು ದೇಶದೆಲ್ಲೆಡೆ ಪಸರಿಸಿದ, ಜನ ಸೇವೆಯೇ ಜೀವನದ ಪರಮೋದ್ದೇಶ ಎಂದು ಕೆಲಸ ಮಾಡಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಂತಹ ದೂರದೃಷ್ಟಿಯ ನಾಯಕರು ರಾಜ್ಯಕ್ಕೆ ಬೇಕಿದೆ’ ಎಂದು ಹಿರಿಯ ಸಾಹಿತಿ ಪ್ರೊ.ಎಂ.ಕರಿಮುದ್ದಿನ್ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜನಮನ ಸಾಂಸ್ಕೃತಿಕ ಪ್ರತಿಷ್ಠಾನ ಶನಿವಾರ ಏರ್ಪಡಿಸಿದ್ದ ‘ವಿಧಾನಸೌಧ ಶಿಲ್ಪಿ ಕೆಂಗಲ್ ಹನುಮಂತಯ್ಯ–100’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಹನುಮಂತಯ್ಯ ಅವರು ವಿಧಾನಸೌಧ ನಿರ್ಮಿಸುವ ಜತೆಗೆ ರೈತರು, ಹಿಂದುಳಿದವರು, ಅಲ್ಪಸಂಖ್ಯಾತರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಪಾರದರ್ಶಕ ಆಡಳಿತದ ಮೂಲಕ ಆದರ್ಶ ರಾಜಕಾರಣಿ ಎನಿಸಿದ್ದಾರೆ’ ಎಂದು ಸ್ಮರಿಸಿದರು.
ಜನಮನ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಿ. ಪುಟ್ಟಸ್ವಾಮಿ ಮಾತನಾಡಿ, ‘ಕೆಂಗಲ್ ಹನುಮಂತಯ್ಯ ಅವರ ಕೊಡುಗೆಗಳು ಇಂದಿನ ಯುವ ಜನರಿಗೆ ತಿಳಿದಿಲ್ಲ. ತಿಳಿಯಲು ಯತ್ನಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಎ.ಎನ್.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಡಾ.ರಂಗಸ್ವಾಮಿ, ಪ್ರೊ.ನಬಿಜಾನ್, ಪ್ರೊ.ಮೊಹಮ್ಮದ್ ಮುಸ್ತಫಾ, ಡಾ.ಬಿ.ನರಸಿಂಹಹ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.