ADVERTISEMENT

ಖಾಸಗೀಕರಣ ಹುನ್ನಾರ; ಶಾಸಕ ಆರೋಪ

ಅಂಚೆ ನೌಕರರ ಸಂಘಗಳ ಜಂಟಿ ದ್ವೈವಾರ್ಷಿಕ ಅಧಿವೇಶನದಲ್ಲಿ ಎಂ.ಕೆ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 15 ಮೇ 2017, 8:46 IST
Last Updated 15 ಮೇ 2017, 8:46 IST
ಮೈಸೂರು:  ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಿಸುವ ಹುನ್ನಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ಶಾಸಕ ಎಂ.ಕೆ.ಸೋಮಶೇಖರ್‌ ಆರೋಪಿಸಿದರು.
 
ಸರಸ್ವತಿಪುರಂನಲ್ಲಿರುವ ಪ್ರಾದೇಶಿಕ ದೂರಸಂಪರ್ಕ ತರಬೇತಿ ಕೇಂದ್ರದಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘಗಳು ಭಾನುವಾರ ಏರ್ಪಡಿಸಿದ್ದ 37ನೇ ಜಂಟಿ ದ್ವೈವಾರ್ಷಿಕ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
 
ಭಾರತ್‌ ಅರ್ಥ್‌ ಮೂವರ್‌್ಸ ಪ್ರೈವೇಟ್‌ ಲಿಮಿಟೆಡ್‌ (ಬಿಇಎಂಎಲ್‌) ಲಕ್ಷ ಕೋಟಿಗೂ ಅಧಿಕ ಆಸ್ತಿ ಹೊಂದಿದೆ. ಆದರೆ, ಇದನ್ನು ₹ 2 ಸಾವಿರ ಕೋಟಿಗೆ ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರಿ ಸ್ವಾಮ್ಯದ ಹಲವು ಉದ್ಯಮಗಳ ಆಸ್ತಿಯ ಮೇಲೆ ಬಂಡವಾಳಶಾಹಿಗಳ ಕಣ್ಣು ಬಿದ್ದಿದೆ ಎಂದರು.
 
 ಒಂದು ಕಾಲದಲ್ಲಿ ಅಂಚೆ ಇಲಾಖೆ ಅಗ್ರಮಾನ್ಯವಾಗಿತ್ತು. ಟೆಲಿಗ್ರಾಫ್‌ ಮತ್ತು ಪತ್ರಗಳಿಗಾಗಿ ಕಾತುರರಾಗಿದ್ದರು. ಕಾಲ ಕಳೆದಂತೆ ಇಲಾಖೆ ತಂತ್ರಜ್ಞಾನ ಅಳವಡಿಸಿಕೊಂಡು ಬದಲಾವಣೆಗೆ ಹೊಂದಿಕೊಂಡಿದೆ. ಆದರೂ ಕೇಂದ್ರ ಸರ್ಕಾರ ಮಾತ್ರ ಅಂಚೆ ಇಲಾಖೆಯನ್ನು ಕಡಗಣಿಸಿದೆ. ನೌಕರರಿಗೆ ಸರಿಯಾದ ಸವಲತ್ತು ನೀಡದೆ ದೌರ್ಜನ್ಯ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಕಾರ್ಪೊರೇಟ್‌ ಕಂಪೆನಿಗಳ ಅನು ಕೂಲಕ್ಕೆ ತಕ್ಕಂತೆ ನೀತಿಗಳು ರೂಪು ಗೊಳ್ಳುತ್ತಿವೆ. ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನಾಗಿಸುವ ತಂತ್ರಗಾರಿಕೆ ಮೋದಿ ಅವರಿಗೆ ಕರಗತವಾಗಿದೆ. ಜನ ಸಾಮಾನ್ಯರು, ಕೆಳವರ್ಗದ ನೌಕರರು ತುಳಿತಕ್ಕೆ ಒಳಗಾಗುತ್ತಿದ್ದಾರೆ ಎಂದರು.
 
ಶಾಸಕ ಸಾ.ರಾ.ಮಹೇಶ್‌, ಕರ್ನಾ ಟಕ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗದ ನಿರ್ದೇಶಕ ಕೆ.ಎಸ್‌. ಧರ್ಮೇಂದ್ರ, ಹಿರಿಯ ಅಂಚೆ ಅಧೀಕ್ಷಕ ಡಿ.ಶಿವಯ್ಯ, ಕೆ.ಎಚ್‌.ಸಂಜೀವಶೆಟ್ಟಿ, ಜವರಾಯಿಗೌಡ, ಎಚ್‌.ಚಂದ್ರಶೇಖರ್‌, ಮಲ್ಲಿಕಾರ್ಜುನ, ಎಚ್‌.ಆರ್‌.ಈಶ್ವರಪ್ಪ, ಬಿ.ಆರ್‌.ಜಗದೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.