ADVERTISEMENT

ಚರಿತ್ರೆಗಿಂತ ಚಾರಿತ್ರ್ಯ ಮುಖ: ಸಿಪಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 11:36 IST
Last Updated 2 ಜನವರಿ 2017, 11:36 IST

ಮೈಸೂರು: ‘ಚರಿತ್ರೆಗಿಂತ ಚಾರಿತ್ರ್ಯ ಮುಖ್ಯ’ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್‌ ಅಭಿಪ್ರಾಯಪಟ್ಟರು. ನಗರದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಜೆಎಸ್‌ಎಲ್‌ ಪ್ರಕಾಶನ ಶುಕ್ರವಾರ ಆಯೋಜಿಸಿದ್ದ ಗಜಾನನ ಈಶ್ವರ ಹೆಗಡೆ ಅವರ ‘ಲೋಕ ಶಂಕರ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಶಂಕರಾಚಾರ್ಯರ ಜೀವನದ ಘಟನಾವಳಿಗಳು ಈ ಕೃತಿಯಲ್ಲಿ ಅನಾವರಣಗೊಂಡಿವೆ. ಆದರೆ, ಚರಿತ್ರೆಯ ಘಟನೆಗಳನ್ನು ಹೇಳದೆ ಶಂಕರಾಚಾರ್ಯರ ಹೆತ್ತವರೊಂದಿಗಿನ ಒಡನಾಟ, ಅವರ ಬಾಲ್ಯಲೀಲೆಗಳನ್ನು ವಿವರಿಸಲಾಗಿದೆ. ಈ ಕುರಿತು ಚರಿತ್ರೆಯಲ್ಲಿ ಸಿಗುವುದಿಲ್ಲ. ಸಾಂಖ್ಯ ದರ್ಶನ, ಅದ್ವೈತ ದರ್ಶನ, ಹೀಗೆ ವಿವಿಧ ದರ್ಶನಗಳನ್ನು ಈಗಿನ ಕಾಲಕ್ಕೆ ಪ್ರಸ್ತುತಪಡಿಸುವ ಹಾಗೆ ಗೇಯ ಗುಣದೊಂದಿಗೆ ರೂಪಕದ ಮಾದರಿಯಲ್ಲಿ ಲೇಖಕರು ಪ್ರಸ್ತುತಪಡಿ ಸಿದ್ದಾರೆ’ ಎಂದು ಪ್ರಶಂಸಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಎಸ್‌.ಸಿದ್ಧಲಿಂಗಯ್ಯ ಮಾತನಾಡಿ, ನನ್ನ ಶಿಷ್ಯನಾದ ಗಜಾನನ ಅವರ ಸಾಹಿತ್ಯಿಕ ಸಾಧನೆ ಅಭಿನಂದ ನಾರ್ಹ. ಅವರ ಜೀವನದ ಅನುಭೂತಿ ಅಭಿವ್ಯಕ್ತಿಯಾಗಿ ಕಾವ್ಯರೂಪದಲ್ಲಿ ಬರುತ್ತಿದೆ ಎಂದರು.

ಅತಿಥಿಗಳಾಗಿ ಇಳೈ ಆಳ್ವಾರ್‌ ಸ್ವಾಮೀಜಿ, ವಿದ್ವಾನ್ ಗ.ನಾ.ಭಟ್ಟ, ಸಾಹಿತಿ ಭೈರವಮೂರ್ತಿ, ದಾಸ್ತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಿ.ತಿಮ್ಮಯ್ಯ, ರಂಗನಾಥ್‌ ಮೈಸೂರು, ಸ್ವಾತಂತ್ರ್ಯ ಹೋರಾಟಗಾರ್ತಿ ಕೆ.ಎಲ್‌. ಆಲಮೇಲಮ್ಮ, ವಿಜ್ಞಾನಿ ಡಾ.ಶುಭಾ ಕಡಾಂಬಿ ಭಾಗವಹಿಸಿದ್ದರು.

ಲೇಖಕ ಗಜಾನನ ಹೆಗಡೆ, ಅವರ ಪತ್ನಿ ಪದ್ಮಿನಿ ವೇದಿಕೆ ಮೇಲಿದ್ದರು. ಎಸ್‌.ಎಂ.ಹೆಗಡೆ ಸ್ವಾಗತಿಸಿದರು. ಕೆ.ಎಲ್‌.ಪ್ರಸನ್ನಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎಸ್‌.ರಾಮ ಪ್ರಸಾದ್‌ ವಂದಿಸಿದರು. ಎಂ.ಬಸವ ರಾಜು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.