ADVERTISEMENT

ಜೆಡಿಎಸ್‌ ತೊರೆಯುವ ಪ್ರಶ್ನೆಯೇ ಇಲ್ಲ

ನಂಜನಗೂಡು ಉಪಚುನಾವಣೆ; ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಕ್ಕೆ ಕಳಲೆ ಕೇಶವಮೂರ್ತಿ ತೆರೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 11:34 IST
Last Updated 23 ಜನವರಿ 2017, 11:34 IST

ಮೈಸೂರು: ಯಾವುದೇ ಕಾರಣಕ್ಕೂ ಜೆಡಿಎಸ್‌ ಬಿಡುವುದಿಲ್ಲ ಎಂದು ನಂಜನಗೂಡಿನ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಸ್ಪಷ್ಟಪಡಿಸಿದರು. ಇಲ್ಲಿನ ಹೋಟೆಲಿನಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಅಗತ್ಯ ಇದೆ ಎಂಬ ಕಾರಣಕ್ಕೆ ಬೇರೆ ಪಕ್ಷದವರು ಆಹ್ವಾನ ನೀಡುತ್ತಿದ್ದಾರೆ. ಆದರೆ, ಬೆಳೆಸಿದ ಪಕ್ಷವನ್ನು ತ್ಯಜಿಸಲಾರೆ. ಈಗಾಗಲೇ ಎರಡು ಬಾರಿ ಸೋತಿದ್ದೇನೆ. ಪ್ರಸಕ್ತ ವಿಧಾನಸಭೆಯ ಅವಧಿಯು ಕಡಿಮೆ ಇರುವುದರಿಂದ ಮುಂಬರುವ ನಂಜನಗೂಡಿನ ವಿಧಾನಸಭಾ ಉಪ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಅಭ್ಯರ್ಥಿ ಹಾಕುವುದು ಬೇಡ.

2018ರ ವಿಧಾನಸಭೆ ಚುನಾವಣೆ ಕಡೆಗೆ ಗಮನ ಹರಿಸುವುದು ಒಳ್ಳೆಯದು ಎಂಬ ಸಲಹೆಯನ್ನು ಪಕ್ಷದ ವರಿಷ್ಠರಿಗೆ ನೀಡಿದ್ದೆ. ವರಿಷ್ಠರು ಕೈಗೊಳ್ಳುವ ಅಂತಿಮ ತೀರ್ಮಾನಕ್ಕೆ ಬದ್ಧ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಕೇಶವ ಮೂರ್ತಿ ಅವರೇ ಜೆಡಿಎಸ್‌ ಅಭ್ಯರ್ಥಿ ಯಾಗಬೇಕು ಎಂದು ಆಗ್ರಹಿಸಿದರು.

ಕೇಶವಮೂರ್ತಿ ಬಹುದೊಡ್ಡ ಆಸ್ತಿ: ‘ಕೇಶವಮೂರ್ತಿ ಯಾವುದೇ ಪಕ್ಷದಲ್ಲಿ ದ್ದರೂ ಅವರು ಬಹುದೊಡ್ಡ ಆಸ್ತಿ. ಕಾಂಗ್ರೆಸ್‌, ಬಿಜೆಪಿಗೆ ಹಣವೇ ಆಸ್ತಿಯಾದರೆ, ನಮಗೆ ಕೇಶವಮೂರ್ತಿ ಅವರಂತಹ ಪ್ರಾಮಾಣಿಕರೇ ಆಸ್ತಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಅಧಿಕಾರದಲ್ಲಿದ್ದರೂ ಕಾಂಗ್ರೆಸ್‌ಗೆ ಸಮರ್ಥವಾದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಕ್ಕೆ ಆಗುತ್ತಿಲ್ಲ. ಇದಕ್ಕಾಗಿ ಕೇಶವಮೂರ್ತಿ ಅವರನ್ನು ಸೆಳೆಯಲು ನೋಡಿತು. ಆದರೆ, ಹಣಬಲ ಇಲ್ಲದ ಕೇಶವಮೂರ್ತಿ ಯಾವುದೇ ಆಮಿಷ ಗಳಿಗೆ ಒಳಗಾಗದೇ ಪಕ್ಷ ಬಿಡಲು ಒಪ್ಪಲಿಲ್ಲ. ಇದು ಅವರ ಪ್ರಾಮಾಣಿಕತೆಗೆ ಸಾಕ್ಷಿ ಎಂದು ಶ್ಲಾಘಿಸಿದರು.

ಫೆಬ್ರುವರಿ ಅಂತ್ಯದ ಹೊತ್ತಿಗೆ ಮುಂಬರುವ ವಿಧಾನಸಭಾ ಚುನಾ ವಣೆಯ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಈಗ ಯಾವುದೂ ಅಂತಿಮ ತೀರ್ಮಾನವಾಗಿಲ್ಲ. ಸದ್ಯದ ಲಕ್ಷಣ ನೋಡಿದರೆ ಉಪಚುನಾವಣೆ ನಡೆಯ ವುದೇ ಅನುಮಾನವಾಗಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು.

ಮೋದಿ ವಿರುದ್ಧ ಕಿಡಿ: ಫಕೀರನನ್ನು ಪ್ರಧಾನಿ ಮಾಡಿ, ಈಗ ನಾವೇ ಫಕೀರರಾ ದೆವು ಎಂದು ನರೇಂದ್ರ ಮೋದಿ ಬೆಂಬಲಿಗರು ಯೋಚಿಸುತ್ತಿದ್ದಾರೆ. ಮೋದಿ ಒಂದಾದ ಮೇಲೆ ಒಂದು ಕಾಗೆ ಬಿಡುತ್ತಲೇ ಇದ್ದಾರೆ. ಅವುಗಳಲ್ಲಿ ನೋಟು ಅಮಾನ್ಯ ಮಾಡಿದ್ದು, ಬಡವರನ್ನು ಅಕ್ಷರಶಃ ಬೀದಿಗೆ ನಿಲ್ಲಿಸಿತು ಎಂದು ಅವರು ವಿಶ್ಲೇಷಿಸಿದರು. ಬರದಿಂದ ₹ 12 ಸಾವಿರ ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ ಇದು ತಿಳಿಯುತ್ತಿಲ್ಲ. ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.