ಮೈಸೂರು: ಬಿಗಿ ಬಂದೋಬಸ್ತಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಪಥಸಂಚಲನ ಭಾನುವಾರ ನಗರದಲ್ಲಿ ನಡೆಯಿತು. ಮತಿಯ ಸೂಕ್ಷ್ಮ ಪ್ರದೇಶದಲ್ಲಿ ಗಣವೇಷಧಾರಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪಥಸಂಚಲನಕ್ಕೆ ಪೊಲೀಸ್ ಕಮಿಷನರ್ ಅನುಮತಿ ನಿರಾಕರಿಸಿದ್ದರು. ಮಾರ್ಗ ಬದಲಾವಣೆ ಮಾಡಿದ ಬಳಿಕ ನಿಷೇಧಾಜ್ಞೆಯ ನಡುವೆಯೂ ಪಥಸಂಚಲನಕ್ಕೆ ವಿನಾಯಿತಿ ನೀಡಲಾಯಿತು.
ರಾಜೇಂದ್ರನಗರ ವೃತ್ತದ ಬಳಿ ಜಮಾಯಿಸಿದ ಸಾವಿರಕ್ಕೂ ಹೆಚ್ಚು ಗಣವೇಷಧಾರಿಗಳು ವಿವಿಧ ಘೋಷಣೆ ಕೂಗಿದರು. ರಾಜೇಂದ್ರ ಶಾಲೆ ಬಳಿಯಿಂದ ಹೊರಟ ಮೆರವಣಿಗೆ ಶಂಕರ್ ನರ್ಸಿಂಗ್ ಹೋಂ, ಕುರಿಮಂಡಿ, ಕರಿಮಾರಿಯಮ್ಮನ ದೇಗುಲ, ಎನ್.ಆರ್.ಪೊಲೀಸ್ ಠಾಣೆ, ಅಂಬಾ ಭವಾನಿ ವೃತ್ತದ ಮೂಲಕ ರಾಜೇಂದ್ರನಗರದ ಉದ್ಯಾನದಲ್ಲಿ ಅಂತ್ಯಗೊಂಡಿತು.
ಆರ್ಎಸ್ಎಸ್ ಮುಖಂಡರಾದ ವಾಸುದೇವ್ ಭಟ್, ವಾಮನರಾವ್ ಬಾಪಟ್, ಬಿಜೆಪಿ ಮುಖಂಡ ಎಸ್.ಎ.ರಾಮದಾಸ್, ಮೈ.ವಿ.ರವಿಶಂಕರ್, ಎಲ್.ನಾಗೇಂದ್ರ, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಇದ್ದರು. ಭದ್ರತೆಗ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.