ಮೈಸೂರು: ಚಾಮುಂಡಿಬೆಟ್ಟದ ರಸ್ತೆಯ ಕೆಲವೆಡೆ ತಡೆಗೋಡೆ ಕುಸಿದಿದ್ದು, ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ. ಬೆಟ್ಟದಿಂದ ಉತ್ತನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.
ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಇವರಲ್ಲಿ ಕೆಲವರು ಉತ್ತನಹಳ್ಳಿ ಗ್ರಾಮದಲ್ಲಿರುವ ಜ್ವಾಲಾಮುಖಿ ತ್ರಿಪುರಸುಂದರಿ ದೇಗುಲಕ್ಕೂ ತೆರಳುತ್ತಾರೆ. ಆದರೆ, ಈ ರಸ್ತೆಯ ಬಹುತೇಕ ಕಡೆ ತಡೆಗೋಡೆ ಬಿದ್ದು ಹೋಗಿದೆ. ಕಡಿದಾದ ತಿರುವುಗಳಲ್ಲೇ ಈ ಸಮಸ್ಯೆ ಎದುರಾಗಿದೆ.
ಕೆಲವೆಡೆ ಕಲ್ಲುಗಳು ರಸ್ತೆಗೆ ಉರುಳಿವೆ. ಯುವಕರು ರಾತ್ರಿ ವೇಳೆ ವೇಗವಾಗಿ ಕಾರು ಚಾಲನೆ ಮಾಡುತ್ತಾರೆ. ಈಗಾಗಲೇ ಈ ಪ್ರದೇಶದಲ್ಲಿ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ.
‘ರಸ್ತೆಯ ಒಂದು ಬದಿ ಆಳವಾದ ಪ್ರಪಾತವಿದೆ. ಸವಾರರು ತುಸು ನಿಯಂತ್ರಣ ತಪ್ಪಿದರೆ ಸಾವು ಖಚಿತ. ಹಲವು ದಿನಗಳಿಂದ ಇದೇ ಪರಿಸ್ಥಿತಿ ಇದೆ. ಲೋಕೋಪಯೋಗಿ ಇಲಾಖೆಯವರು ಇತ್ತ ಗಮನ ಹರಿಸಿಲ್ಲ’ ಎಂದು ಉತ್ತನಹಳ್ಳಿ ಗ್ರಾಮದ ಸೋಮೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.