ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಸರ್ಕಾರ ಕುರಿತ ‘ಕೆಲವು ವಾಸ್ತವಾಂಶಗಳನ್ನು’ ಹೈಕಮಾಂಡ್ಗೆ ತಿಳಿಸಲು ರಾಷ್ಟ್ರ ರಾಜಧಾನಿಗೆ ಬಂದಿರುವ ಮಾಜಿ ಸಚಿವ ಎಚ್.ವಿಶ್ವನಾಥ್, ಶುಕ್ರವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
‘ಸೋನಿಯಾ ಭೇಟಿ ಕೋರಿ ತಿಂಗಳ ಹಿಂದೆ ಬರೆದಿದ್ದ ಪತ್ರಕ್ಕೆ ಉತ್ತರ ಬಂದಿದ್ದು, ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ನಂತರ ಬರುವಂತೆ ಸೂಚಿಸಲಾಗಿತ್ತು. ಶುಕ್ರವಾರ ಭೇಟಿಗೆ ಅವಕಾಶ ದೊರೆಯಲಿದೆ’ಎಂದು ವಿಶ್ವನಾಥ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಕ್ಷ ಮತ್ತುಸರ್ಕಾರದಲ್ಲಿ ಆಶಾದಾಯಕ ಸ್ಥಿತಿ ಇಲ್ಲ. ಅದನ್ನು ನೈಜ ಕಾಂಗ್ರೆಸ್ಸಿಗನಾಗಿ ವರಿಷ್ಠರ ಗಮನಕ್ಕೆ ತರುವುದು ನನ್ನ ಕರ್ತವ್ಯ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ, ಲೋಪ–ದೋಷ ಸರಿಪಡಿಸಲು ಸೂಚಿಸುವೆ’ ಎಂದು ಅವರು ಸ್ಪಷ್ಟಪಡಿಸಿದರು.
ತೀವ್ರ ಅವಮಾನ: ‘ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ನನಗೆ ಮೇಲಿಂದ ಮೇಲೆ ಅವಮಾನ ಮಾಡಲಾಗುತ್ತಿದೆ. ಉಪ ಚುನಾವಣೆಯ ಪ್ರಚಾರಕ್ಕೂ ನನ್ನನ್ನು ಆಹ್ವಾನಿಸಲಾಗಿಲ್ಲ. ಮೊದಲು ಸ್ಟಾರ್ ಪ್ರಚಾರಕನಾಗಿದ್ದ ನನ್ನನ್ನು ನಿಕೃಷ್ಟವಾಗಿ ನಡೆಸಿಕೊಳ್ಳ ಲಾಗುತ್ತಿದೆ. ಉಪಚುನಾವಣೆಯ ಪ್ರಚಾರಾರ್ಥ ಭಿತ್ತಿಪತ್ರಗಳಲ್ಲಿ ಪ್ರಕಟವಾಗಿದ್ದ ನನ್ನ ಭಾವಚಿತ್ರ ಮತ್ತು ಹೆಸರನ್ನು ಕಿತ್ತು ಹಾಕಿ, ಆ ಜಾಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರನ್ನು ಸೇರಿಸಲಾಗಿತ್ತು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಿ.ಪರಮೇಶ್ವರ್ ಅವರು ಪಕ್ಷ ಮತ್ತು ಸರ್ಕಾರದಲ್ಲಿ ತ್ರಿಪಾತ್ರ ನಿರ್ವಹಿಸುತ್ತಿದ್ದಾರೆ. ಹೀಗೆ ಮೂರು ಜವಾಬ್ದಾರಿ ವಹಿಸಿಕೊಂಡರೆ ಯಾವುದಕ್ಕೂ ನ್ಯಾಯ ಒದಗಿಸುವುದಕ್ಕೆ ಆಗದು ಎಂದ ಅವರು, ‘ನಾನು ಜೆಡಿಎಸ್ಗೆ ಸೇರುತ್ತಿದ್ದೇನೆ. ಪಿರಿಯಾ ಪಟ್ಟಣ ಕ್ಷೇತ್ರದಿಂದ ಟಿಕೆಟ್ ಪಡೆದು ಸ್ಪರ್ಧಿಸಲಿದ್ದೇನೆ ಎಂಬುದು ಕೇವಲ ವದಂತಿ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.