ADVERTISEMENT

‘ಸಂಶೋಧನೆ ಫಲ ಸಮಾಜಕ್ಕೆ ನೀಡಿ’

​ಪ್ರಜಾವಾಣಿ ವಾರ್ತೆ
Published 13 ಮೇ 2017, 10:21 IST
Last Updated 13 ಮೇ 2017, 10:21 IST

ಮೈಸೂರು: ತಂತ್ರಜ್ಞಾನ ಬಳಸಿಕೊಂಡು ಸಂಶೋಧನೆ ನಡೆಸಿ ಅವುಗಳ ಫಲವನ್ನು ಸಮಾಜಕ್ಕೆ ನೀಡಬೇಕು. ಆಗ ಮಾತ್ರ ಪದವಿಯ ಧ್ಯೇಯ ಈಡೇರಲು ಸಾಧ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಪತಿ ಎಸ್‌.ಆರ್‌.ನಿರಂಜನ ಇಲ್ಲಿ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಸೂಕ್ಷ್ಮಜೀವ ವಿಜ್ಞಾನ ಅಧ್ಯಯನ ವಿಭಾಗವು ಶುಕ್ರವಾರ ಹಮ್ಮಿಕೊಂಡಿದ್ದ ‘ಸೂಕ್ಷ್ಮಜೀವ ವಿಜ್ಞಾನ ಪ್ರವೃತ್ತಿ’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ­ಗಳ ಸಂಖ್ಯೆಗಿಂತ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪದವಿ ನೀಡು­ವುದೇ ಶಿಕ್ಷಣ ಆಗಬಾರದು. ಜ್ಞಾನ ಸಂಪನ್ಮೂಲವನ್ನು ಹೆಚ್ಚಿಸಬೇಕು. ಶೈಕ್ಷಣಿಕ ಗುಣಮಟ್ಟವನ್ನು ಅಂತರ­ರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕಿದೆ. ದೇಶದ ಅನೇಕ ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿ ನೊಬೆಲ್‌ ಪುರಸ್ಕೃತ­ರಾಗಿದ್ದಾರೆ.

ADVERTISEMENT

ಅವರೆಲ್ಲರೂ ಭಾರತದಲ್ಲೇ ಪದವೀ­ಧರರಾಗಿ ತೆರಳಿದ್ದಾರೆ. ಉದ್ಯೋಗಾ­ವಕಾಶದ ಕೊರತೆ, ಅತಿ ಹೆಚ್ಚು ಸಿಗುವ ಫೆಲೊಶಿಪ್‌ ಮೊತ್ತವೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
ಸೂಕ್ಷ್ಮ ಜೀವ ವಿಜ್ಞಾನಕ್ಕೆ ಸಂಬಂಧಿಸಿ ಹೆಚ್ಚು ಹೆಚ್ಚು ಸಂಶೋಧನೆಗಳು ನಡೆಯ­ಬೇಕು. ಪಿಎಚ್‌.ಡಿಗಾಗಿ ಮಂಡಿಸುವ ಪ್ರಬಂಧಗಳು ಅವಸರದಲ್ಲಿ ಸಿದ್ಧಗೊಳ್ಳ­ಬಾರದು. ಮೈಸೂರು ವಿವಿಯಲ್ಲಿ ಸಂಶೋಧನೆಗೆ ಉತ್ತಮ ಮೂಲ­ಸೌಕರ್ಯಗಳು ಇವೆ. ಅವುಗಳನ್ನು ಬಳಸಿಕೊಳ್ಳಬೇಕು ಎಂದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವ ರಸಾಯನ ವಿಜ್ಞಾನ ಅಧ್ಯಯನ ವಿಭಾಗದ ಪ್ರೊ.ಪಿ.ಎನ್‌.­ರಂಗರಾಜನ್‌ ‘ಸಾಂಪ್ರದಾಯಿಕ, ಆಧುನಿಕ ಮತ್ತು ಭವಿಷ್ಯದ ಲಸಿಕೆಗಳು’ ಕುರಿತು ಮಾತನಾಡಿದರು.

ವೈದ್ಯಕೀಯ ವಿಜ್ಞಾನ ಕ್ಷೇತ್ರದ ಬೆಳವಣಿಗೆಯಿಂದಾಗಿ ಮಹತ್ತರ ಬದಲಾವಣೆಗಳು ಆಗಿವೆ. ಪೋಲಿಯೊ ನಿರ್ಮೂಲನೆಯೇ ಇದಕ್ಕೆ ಉದಾಹರಣೆ. ಲಸಿಕೆಗಳಿಂದಾಗಿ ಮನುಷ್ಯನ ಜೀವಿತಾವಧಿಯಲ್ಲಿ ಏರಿಕೆ ಆಗಿದೆ. ಲಸಿಕೆಗಳು ರಕ್ಷಣೆಯ ಅಸ್ತ್ರಗಳು ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ದಯಾನಂದ ಮಾನೆ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಭವನದ ಮುಖ್ಯ ಸಂಯೋಜಕ ಡಾ.ಜಿ.ಹೇಮಂತ­ಕುಮಾರ್‌, ಮೈಸೂರು ವಿಶ್ವವಿದ್ಯಾ­ನಿಲಯದ ಸೂಕ್ಷ್ಮಜೀವ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಶುಭಾಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.