ಹುಣಸೂರು: ರೈತರು ಸಹಕಾರಿ ಬ್ಯಾಂಕ್ನಲ್ಲಿ ಪಡೆಯುವ ಸಾಲವನ್ನು ಸಕಾಲದಲ್ಲಿ ಹಿಂದಿರುಗಿಸುವುದರಿಂದ ಸಹಕಾರಿ ಬ್ಯಾಂಕ್ ಸದೃಢವಾಗಿ ಬೆಳೆಯಲು ಸಹಕಾರವಾಗಲಿದೆ ಎಂದು ಎಂ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹರೀಶ್ಗೌಡ ಹೇಳಿದರು.
ತಾಲ್ಲೂಕಿನ ಹನಗೋಡು ಹೋಬಳಿ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಹನಗೋಡು ಶಾಖೆಯ ಬ್ಯಾಂಕ್ ಅಧ್ಯಕ್ಷ ಲೋಕೇಶ್ ಮಾತನಾಡಿ, ಬ್ಯಾಂಕ್ನಿಂದ ಸಾಲ ಪಡೆದ ರೈತರು ರೂ34 ಕೋಟಿ ಸಾಲವನ್ನು ಹಿಂದಿರುಗಿಸಿಲ್ಲ. ಕೇಂದ್ರೀಯ ಬ್ಯಾಂಕ್ ಈ ಮೂಲ ಹಣದ ಮೇಲೆ ಶೇ 14ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ. ಸಾಲ ಪಡೆದಿರುವ ರೈತರು ಸಕಾಲಕ್ಕೆ ಹಣ ಪಾವತಿಸಿದಲ್ಲಿ ಬ್ಯಾಂಕ್ ಲಾಭದಾಯಕವಾಗಿ ಬೆಳೆಯಲು ಸಹಕಾರವಾಗಲಿದೆ ಎಂದರು.
ಸಭೆಗೆ ಬ್ಯಾಂಕ್ ಕಾರ್ಯದರ್ಶಿ ಪುಷ್ಪಕಲಾ ಅವರು, 2013–14ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ಈ ಹಿಂದಿನ ಕಾರ್ಯದರ್ಶಿ ಮಾಡಿದ ರೂ30 ಲಕ್ಷ ಅವ್ಯವಹಾರದಿಂದಾಗಿ ಬ್ಯಾಂಕ್ ಈಗಲೂ ರೂ15 ಲಕ್ಷ ನಷ್ಟದಲ್ಲಿದೆ ಎಂದರು.
ಆಸ್ತಿ ಮುಟ್ಟುಗೋಲು: ‘ಬ್ಯಾಂಕ್ ಹಿಂದಿನ ವ್ಯವಸ್ಥಾಪಕ ಬೊಮ್ಮರಾಯಿಗೌಡ ಮಾಡಿರುವ ರೂ30 ಲಕ್ಷ ಅವ್ಯವಹಾರದ ಬಗ್ಗೆ ತನಿಖೆ ಚರುಕುಗೊಳಿಸಲು ನ್ಯಾಯಾಲಯಕ್ಕೆ ಬ್ಯಾಂಕ್ ಮನವಿ ಮಾಡಿಕೊಳ್ಳಬೇಕು. ಇದಲ್ಲದೆ ಜಿಲ್ಲಾಧಿಕಾರಿಗೂ ಮನವಿ ಮಾಡಿಕೊಂಡು ವ್ಯವಸ್ಥಾಪಕ ಮಾಡಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಬ್ಯಾಂಕ್ಗೆ ಪಾವತಿಸುವ ಕ್ರಮ ತೆಗೆದುಕೊಳ್ಳಬೇಕು ಎಂದು -ಸದಸ್ಯರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.