ADVERTISEMENT

ಸ್ವಚ್ಛ ಭಾರತ ಸಮೀಕ್ಷೆ ಆರಂಭ

ನಗರದ ಹಲವೆಡೆ ಪರಿಶೀಲನೆ ನಡೆಸಿದ ತಂಡ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:54 IST
Last Updated 5 ಜನವರಿ 2017, 9:54 IST

ಮೈಸೂರು: ಸ್ವಚ್ಛ ಭಾರತ್ ಮಿಷನ್‌ನ ಕ್ವಾಲಿಟಿ ಆಫ್ ಇಂಡಿಯಾ ವತಿಯಿಂದ ಮೂವರು ಸದಸ್ಯರನ್ನು ಒಳಗೊಂಡ ಸ್ವಚ್ಛನಗರಿ ಕುರಿತ ಸಮೀಕ್ಷಾ ತಂಡವು ನಗರಕ್ಕೆ ಬುಧವಾರ ಬಂದು ದಿನವಿಡೀ ಪರಿಶೀಲನೆ ನಡೆಸಿತು. ಚೈತನ್ಯ, ಶರವಣ ಹಾಗೂ ಕೊಟ್ರೇಶ್ ಅವರ ತಂಡ ಮೊದಲಿಗೆ ಪಾಲಿಕೆ ಆಯುಕ್ತ ಜಿ.ಜಗದೀಶ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ನಂತರ, ಕೊಟ್ರೇಶ್ ತಂಡ ಪಾಲಿಕೆ ಕಚೇರಿಯಲ್ಲಿ ಸ್ವಚ್ಚತೆ ಕುರಿತು ಪಾಲಿಕೆ ಕೈಗೊಂಡ ಕ್ರಮ ಕುರಿತು ಪರಿಶೀಲಿಸಿತು. ಚೈತನ್ಯ ಮತ್ತು ಶರವಣ ತಂಡ ನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿತು.

ಶರವಣ ಅವರು ಪಾಲಿಕೆಯ ಆರೋಗ್ಯ ಅಧಿಕಾರಿಗಳೊಂದಿಗೆ ಗೌರಿ ಶಂಕರನಗರ, ಅವಧೂತ ದತ್ತಪೀಠ, ವಾಣಿವಿಲಾಸ ಮಾರುಕಟ್ಟೆ, ಬಂದಂತಮ್ಮ ದೇವಸ್ಥಾನ, ಕುವೆಂಪುನ ಗರದ ಕಾಂಪ್ಲೆಕ್ಸ್, ಟಿ.ಕೆ.ಬಡಾವಣೆ, ಜೆಎಸ್ಎಸ್ ಕಾನೂನು ಕಾಲೇಜಿನ ಹಿಂಭಾಗದ ಶೌಚಾಲಯ ಹಾಗೂ ಮೈಸೂರು ಮಾಲ್‌ಗಳಲ್ಲಿನ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ ಸ್ವಚ್ಛತೆ ಕುರಿತು ಅಧಿಕಾರಿಗಳೊಂದಿಗೆ ಯಾವುದೇ ಚರ್ಚೆ ನಡೆಸದ ಅಧಿಕಾರಿಗಳು ಕೆಲವು ಆಯ್ದ ಸ್ಥಳಗಳ ಚಿತ್ರ ತೆಗೆದು ತಮ್ಮ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದರು ಎನ್ನಲಾಗಿದೆ. ವಲಯಾಧಿಕಾರಿ ಪುಟ್ಟಶೇಷಗಿರಿ  ಜತೆ ಚೈತನ್ಯ ಅವರು, ದೇವರಾಜ ಮಾರು ಕಟ್ಟೆ, ಗ್ರಾಮಾಂತರ ಬಸ್‌ ನಿಲ್ದಾಣ, ರಾಘವೇಂದ್ರನಗರ, ನೆಹರೂ ನಗರ, ಪಡುವಾರಹಳ್ಳಿಯಲ್ಲಿ ಸಮೀಕ್ಷೆ ನಡೆಸಿದರು. ತಂಡಕ್ಕೆ ಕೆಲವೆಡೆ ಕಸದ ದರ್ಶನವಾಗಿದೆ ಎನ್ನಲಾಗಿದೆ.

ಜ. 6ರವರೆಗೂ ತಂಡವು ನಗರದಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದೆ. ಬಹುತೇಕ ಕಡೆ ಸ್ವಚ್ಛತೆ ದರ್ಶನ: ತಂಡಕ್ಕೆ ನಗರದ ಬಹುತೇಕ ಕಡೆ ಸ್ವಚ್ಛತೆ ದರ್ಶನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವೆಡೆ ಜನರ ಅಭಿಪ್ರಾಯ ಸಂಗ್ರಹಿಸಿದೆ. ಪೌರಕಾರ್ಮಿಕರು ಸ್ವಚ್ಛತೆ ಯಲ್ಲಿ ತೊಡಗಿದ್ದಾರೆ. ದೇವರಾಜ ಮಾರುಕಟ್ಟೆ ಮುಂದಿನ ರಸ್ತೆಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡಲು ಅಧಿಕಾರಿಗಳು ಅವಕಾಶ ಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.