ADVERTISEMENT

18 ಸಾವಿರ ಹುದ್ದೆ ಸೃಷ್ಟಿಸಲು ಶಿಫಾರಸು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 4:37 IST
Last Updated 18 ಡಿಸೆಂಬರ್ 2017, 4:37 IST
ಮೈಸೂರಿನಲ್ಲಿ ಭಾನುವಾರ ನಡೆದ ರಾಜ್ಯ ಸರ್ಕಾರಿ ಫಾರ್ಮಸಿಸ್ಟ್‌ಗಳ ಸಂಘದ ಕಾರ್ಯಕ್ರಮದಲ್ಲಿ ಡಾ.ಸಲಾಲುದ್ದೀನ್‌, ಡಾ.ಪ‍್ರಮೋದಕುಮಾರ್‌, ಡಾ.ಹನುಮಂತಾಚಾರ್ಯ ಕೆ.ಜೋಶಿ, ಸಿ.ಎಲ್‌.ಸೋಮಶೇಖರ್‌, ಡಾ.ಜಿ.ಎಂ.ವಾಮದೇವ್‌, ಡಾ.ಪಿ.ಎಲ್‌.ನಟರಾಜ್‌, ಡಾ.ಬಿ.ಬಸವರಾಜ್‌, ಡಾ.ಕೆ.ಎಚ್‌.ಪ್ರಸಾದ್‌, ಡಾ.ಎಸ್‌.ರಾಧಾಮಣಿ. ಡಾ.ಪಶುಪತಿ, ಬಿ.ಎಸ್‌.ದೇಸಾಯಿ, ಶ್ರೀಕಂಠಯ್ಯ ಇದ್ದಾರೆ
ಮೈಸೂರಿನಲ್ಲಿ ಭಾನುವಾರ ನಡೆದ ರಾಜ್ಯ ಸರ್ಕಾರಿ ಫಾರ್ಮಸಿಸ್ಟ್‌ಗಳ ಸಂಘದ ಕಾರ್ಯಕ್ರಮದಲ್ಲಿ ಡಾ.ಸಲಾಲುದ್ದೀನ್‌, ಡಾ.ಪ‍್ರಮೋದಕುಮಾರ್‌, ಡಾ.ಹನುಮಂತಾಚಾರ್ಯ ಕೆ.ಜೋಶಿ, ಸಿ.ಎಲ್‌.ಸೋಮಶೇಖರ್‌, ಡಾ.ಜಿ.ಎಂ.ವಾಮದೇವ್‌, ಡಾ.ಪಿ.ಎಲ್‌.ನಟರಾಜ್‌, ಡಾ.ಬಿ.ಬಸವರಾಜ್‌, ಡಾ.ಕೆ.ಎಚ್‌.ಪ್ರಸಾದ್‌, ಡಾ.ಎಸ್‌.ರಾಧಾಮಣಿ. ಡಾ.ಪಶುಪತಿ, ಬಿ.ಎಸ್‌.ದೇಸಾಯಿ, ಶ್ರೀಕಂಠಯ್ಯ ಇದ್ದಾರೆ   

ಮೈಸೂರು: ‘ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಕಾರ್ಯ ಒತ್ತಡ ಹೆಚ್ಚಾಗಿದೆ. ಹೀಗಾಗಿ, ಸುಮಾರು 18 ಸಾವಿರ ಹೊಸ ಹುದ್ದೆಗಳನ್ನು ಸೃಷ್ಟಿಸಲು ಶಿಫಾರಸು ಮಾಡಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಪಿ.ಎಲ್‌.ನಟರಾಜ್‌ ತಿಳಿಸಿದರು.

56ನೇ ವರ್ಷದ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಅಂಗವಾಗಿ ರಾಜ್ಯ ಸರ್ಕಾರಿ ಫಾರ್ಮಸಿಸ್ಟ್‌ಗಳ ಸಂಘದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಘಟಕ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಚ್ಚುವರಿಯಾಗಿ ಫಾರ್ಮಸಿಸ್ಟ್‌ ಹುದ್ದೆಗಳನ್ನು ಸೃಷ್ಟಿಸಲು ಕೋರಿದ್ದೇವೆ. ಅಲ್ಲದೆ, ಫಾರ್ಮಸಿಸ್ಟ್‌ಗಳಿಗೆ ಬಡ್ತಿ ನೀಡುವ ಬಗ್ಗೆಯೂ ಶಿಫಾರಸು ಮಾಡಿದ್ದೇವೆ ಎಂದರು.

ಕಳೆದ ವರ್ಷ ಹೊರಗುತ್ತಿಗೆ ಆಧಾರದ ಮೇಲೆ 520 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಕಾಯಂ ಆಗಿ ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಇಲಾಖೆಗೆ ಪತ್ರ ಬರೆದಿದ್ದೇವೆ. ಅದಕ್ಕೆ ಒಪ್ಪಿಗೆ ಲಭಿಸಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಫಾರ್ಮಸಿಸ್ಟ್‌ಗಳ ಅಗತ್ಯವಿದೆ. ಆದರೆ, ಹೊರಗುತ್ತಿಗೆ ಆಧಾರದ ಫಾರ್ಮಸಿಸ್ಟ್‌ಗಳಿಗೆ ಕೇವಲ ₹ 10,500 ವೇತನ ನಿಗದಿಪಡಿಸಲಾಗಿದೆ. ಇದರಿಂದ ಅಭ್ಯರ್ಥಿಗಳು ಬರುತ್ತಿಲ್ಲ. ಹೀಗಾಗಿ, ವೇತನವನ್ನು ₹ 15 ಸಾವಿರ ನಿಗದಿಪಡಿಸುವಂತೆ ಕೋರಿದ್ದೇವೆ ಎಂದು ಹೇಳಿದರು.

ADVERTISEMENT

ಫಾರ್ಮಸಿಸ್ಟ್‌ಗಳ ಹಲವು ಬೇಡಿಕೆಗಳಿದ್ದು, ಅವುಗಳನ್ನು ಈಡೇರಿಸಲು ನನ್ನ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ. ಮೇಲಧಿಕಾರಿಗಳೊಂದಿಗೆ ಚರ್ಚೆ ಮಾಡಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಜಿ.ಎಂ.ವಾಮದೇವ ಮಾತನಾಡಿ, ‘ಸಂಘದವರು ಒಗ್ಗಟ್ಟಾಗಿರಬೇಕು. ಈ ಮೂಲಕ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳಬಹುದು. ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ. ಇಲ್ಲಿ ದುಡ್ಡಿಗೆ ಯಾವುದೇ ರೀತಿಯ ಬರ ಇಲ್ಲ’ ಎಂದರು.

ಸಂಘದ ರಾಜ್ಯಾಧ್ಯಕ್ಷ ಬಿ.ಎಸ್‌.ದೇಸಾಯಿ, ‘ಇದೇ 19ರಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೇಡಿಕೆ ಮಂಡಿಸಲಿದ್ದೇವೆ. ಫಾರ್ಮಸಿಸ್ಟ್‌ಗಳ ನೇಮಕ, ಬಡ್ತಿ ವಿಚಾರ ಪ್ರಸ್ತಾಪಿಸಲಿದ್ದೇವೆ. ನಾವೇನು ಮುಷ್ಕರದ ಹಾದಿ ಹಿಡಿದಿಲ್ಲ’ ಎಂದು ತಿಳಿಸಿದರು.

ಶಾರದಾವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ಯ ಕೆ.ಜೋಶಿ ಮಾತನಾಡಿ, ‘ಔಷಧ ಅಥವಾ ಮಾತ್ರೆಯ ಬಗ್ಗೆ ಸ್ಟ್ರಿಪ್‌ನಲ್ಲಿ ಪೂರ್ಣ ಮಾಹಿತಿ ಇರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಲ್ಲಿ ಗೊಂದಲ ನಿವಾರಿಸಲು ಕನ್ನಡದಲ್ಲಿ ಔಷಧ ಮಾಹಿತಿ ಕೈಪಿಡಿಯನ್ನು ಸರ್ಕಾರ ಹೊರತರಬೇಕು’ ಎಂದು ಸಲಹೆ ನೀಡಿದರು.

7ನೇ ತರಗತಿ, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುನಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜ್‌, ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್‌.ಪ್ರಸಾದ್‌, ಮೈಸೂರು–ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಲ್‌.ಸೋಮಶೇಖರ್‌, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್‌ ಹಾಗೂ ನಿರ್ದೇಶಕಿ ಡಾ.ಎಸ್‌.ರಾಧಾಮಣಿ, ರಾಜ್ಯ ಸರ್ಕಾರಿ ನೌಕರರ ಸಂಘದ ಶ್ರೀಕಂಠಯ್ಯ, ಫರೂಕಿಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಸಲಾಲುದ್ದೀನ್‌, ಜೆಎಸ್‌ಎಸ್‌ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದಕುಮಾರ್‌ ಇದ್ದರು.

* * 

ಪ್ರತಿವರ್ಷ ನೇಮಕಾತಿ ಆಗಬೇಕು. ಆಗ ಸಿಬ್ಬಂದಿ ಕೊರತೆ ನೀಗುತ್ತದೆ. ಅಲ್ಲದೆ, ಪ್ರತಿಭಾವಂತ ಅಭ್ಯರ್ಥಿಗಳು ಲಭ್ಯರಾಗುತ್ತಾರೆ
ಡಾ.ಪಿ.ಎಲ್‌.ನಟರಾಜ್‌ ನಿರ್ದೇಶಕ, ಆರೋಗ್ಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.