ಮೈಸೂರು: ‘ಜಗತ್ತಿನ 192 ದೇಶಗಳು ಈ ಬಾರಿ ವಿಶ್ವ ಯೋಗ ದಿನಾಚರಣೆ ಮಾಡುತ್ತಿವೆ. ಇದರಲ್ಲಿ 48 ಮುಸ್ಲಿಂ ಪ್ರಾಬಲ್ಯದ ದೇಶಗಳೇ ಇವೆ’ ಎಂದು ಯುವಜನ ಕ್ರೀಡಾ ಕೇಂದ್ರದ ನಿರ್ದೇಶಕ ಎಂ.ಎನ್.ನಟರಾಜು ಹೇಳಿದರು.
ಕೆ.ಎಂ. ಪ್ರವೀಣ್ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಯೋಗ ಪ್ರವೀಣ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
‘ಯೋಗದ ಪ್ರಯೋಗಗಳು ಈಗ ಸರಹದ್ದು ಮೀರಿವೆ. ದೇಶ, ಧರ್ಮ, ಜನಾಂಗದ ಭೇದ ಇದಕ್ಕಿಲ್ಲ. ಆರೋಗ್ಯ ಕಾಪಾಡುವುದೊಂದೇ ಧ್ಯೇಯ. ಯಾರು ಬೇಕಾದರೂ ಯೋಗ ಮಾಡಬಹುದು ಎಂಬುದನ್ನು ಜಗತ್ತು ಅರಿತಿದೆ’ ಎಂದು ಅವರು ತಿಳಿಸಿದರು.
‘ಗಿನ್ನಿಸ್ ದಾಖಲೆಗಾಗಿ ಜೂನ್ 21ರಂದು ನಡೆಯುವ ಸಾಮೂಹಿಕ ಯೋಗ ಪ್ರದರ್ಶನ ಇತಿಹಾಸವಾಗಲಿದೆ. ಈ ಮೂಲಕ ಯೋಗದ ಜತೆಜತೆಗೇ ಮೈಸೂರಿನ ಹೆಸರೂ ಬೆಳಗಲಿದೆ. ಮುಂದೆ ಪ್ರವಾಸೋದ್ಯಮಕ್ಕೂ ಇದು ಸಹಕಾರಿ’ ಎಂದರು.
ಸಮಾಜ ಸೇವಕ ರಘುರಾಮ ವಾಜಪೇಯಿ ಅವರು ಆರು ಸಾಧಕರಿಗೆ ‘ಯೋಗ ಪ್ರವೀಣ’ ಪ್ರಶಸ್ತಿ ಪ್ರದಾನ ಮಾಡಿದರು. ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಯೋಗ ಪ್ರಕಾಶ್, ಯೋಗ ಶಿಕ್ಷಕರಾದ ಪೊಲೀಸ್ ಪಬ್ಲಿಕ್ ಸ್ಕೂಲಿನ ನಾಗಭೂಷಣ, ಮೈಸೂರು ಯೋಗ ಶಾಲೆಯ ಎಚ್.ಜಿ.ಹಿರಣ್ಣಯ್ಯ, ಚಿನ್ಮಯ ಯೋಗ ಕೇಂದ್ರದ ಕೆ.ಆರ್.ಪಾರ್ವತಮ್ಮ, ನಿರ್ವಾಣ ಯೋಗ ಶಾಲೆಯ ಶ್ರೀನಾಥ್, ಹಿಮಾಲಯ ಫೌಂಡೇಷನ್ ಸಂಸ್ಥಾಪಕ ಎನ್.ಅನಂತ್ ಪ್ರಶಸ್ತಿ ಸ್ವೀಕರಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಕೆ.ಆರ್.ಮೋಹನ್ಕುಮಾರ್ ಮಾತನಾಡಿದರು. ಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್, ಜೆಡಿಎಸ್ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜು, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಮುಖಂಡ ಅಮರನಾಥ್, ಎಚ್.ಎನ್.ಶ್ರೀಧರ್ ಮೂರ್ತಿ, ಸುಮಂತ್ ಶಾಸ್ತ್ರಿ, ಉದ್ಯಮಿ ಅಪೂರ್ವ ಸುರೇಶ್ ಇದ್ದರು. ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.