ADVERTISEMENT

2 ತಿಂಗಳಲ್ಲಿ ಬಯಲು ಶೌಚಮುಕ್ತ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 5:42 IST
Last Updated 2 ಜನವರಿ 2018, 5:42 IST

ಮೈಸೂರು: ಎರಡು ತಿಂಗಳಲ್ಲಿ ಮೈಸೂರು ಜಿಲ್ಲೆಯನ್ನು ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್‌ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ತಿ.ನರಸೀಪುರ ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳನ್ನು ಬಯಲು ಶೌಚಾಲಯ ಮುಕ್ತ ತಾಲ್ಲೂಕುಗಳನ್ನಾಗಿ ಅಧಿಕೃತವಾಗಿ ಘೋಷಿಸಲಾಯಿತು.

ನಂತರ ಕಾರ್ಯನಿರ್ವಹಣಾಧಿಕಾರಿಗಳಾದ ಹುಣಸೂರಿನ ಕೃಷ್ಣಕುಮಾರ್, ಪಿರಿಯಾಪಟ್ಟಣದ ಬಸವರಾಜು, ತಿ.ನರಸೀಪುರದ ರಾಜು ಅವರನ್ನು ಸನ್ಮಾನಿಸಲಾಯಿತು. ಸ್ವಚ್ಛ ಭಾರತ ಅಭಿಯಾನದ ಸಂಚಾಲಕರಾದ ಹುಣಸೂರಿನ ಮಹದೇವು, ಪಿರಿಯಾಪಟ್ಟಣದ ನಾಗರಾಜು ಹಾಗೂ ತಿ.ನರಸೀಪುರದ ದಿನೇಶಕುಮಾರ್‌ ಅವರನ್ನು ಅಭಿನಂದಿಸಲಾಯಿತು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಿವಶಂಕರ್‌, ‘ಭಾನುವಾರ ರಾತ್ರಿ ಪಿರಿಯಾಪಟ್ಟಣ ಹಾಗೂ ತಿ.ನರಸೀಪುರ ತಾಲ್ಲೂಕುಗಳನ್ನು ಬಯಲು ಶೌಚಮುಕ್ತ ತಾಲ್ಲೂಕುಗಳಾಗಿ ಘೋಷಿಸಿದ್ದೇವೆ. ಹುಣಸೂರನ್ನೂ ಸೇರಿ ಮೂರು ತಾಲ್ಲೂಕುಗಳ ಅಧಿಕಾರಿಗಳನ್ನು ಸನ್ಮಾನಿಸುವ ಮೂಲಕ ಬಾಕಿ ನಾಲ್ಕು ತಾಲ್ಲೂಕುಗಳಿಗೆ ಪ್ರೇರಣೆ ನೀಡಲಾಗುತ್ತಿದೆ’ ಎಂದು ಹೇಳಿದರು.

2 ತಿಂಗಳ ಗುರಿ: ‘ಜನವರಿಯಲ್ಲಿ ಮೈಸೂರು ಹಾಗೂ ಕೆ.ಆರ್‌.ನಗರ ತಾಲ್ಲೂಕು, ಫೆಬ್ರುವರಿಯಲ್ಲಿ ಎಚ್‌.ಡಿ.ಕೋಟೆ ಹಾಗೂ ನಂಜನಗೂಡು ತಾಲ್ಲೂಕುಗಳನ್ನು ಬಯಲು ಶೌಚಮುಕ್ತವೆಂದು ಘೋಷಿಸಲಾಗುವುದು. ಸಮಯ ಕಡಿಮೆಯಿದೆ; ಗುರಿ ಹಿರಿಯದಿದೆ. ಸ್ವಚ್ಛ ಭಾರತ ಆಂದೋಲನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಜಿಲ್ಲೆಯನ್ನು ಸಂಪೂರ್ಣ ಬಯಲು ಶೌಚಮುಕ್ತ ಎಂದು ಘೋಷಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.