ಎಚ್.ಡಿ.ಕೋಟೆ: ಮುಂದಿನ ವಿಧಾನಸಭೆ ಚುನಾವಣೆಗೆ ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡುವುದಾಗಿ ಮಾಜಿ ಶಾಸಕ ಚಿಕ್ಕಣ್ಣ ತಿಳಿಸಿದರು. ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮಾವೇಶದಲ್ಲಿ ಎಚ್.ಡಿ.ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದೇನೆ. ಪಕ್ಷದ ಕಚೇರಿ ಪ್ರವೇಶಿಸಲು ಒಳ್ಳೆಯ ದಿನ ನೋಡಿಕೊಂಡು ಪ್ರವೇಶ ಮಾಡಿದ್ದೇನೆ ಎಂದರು.
ತಾಲ್ಲೂಕಿನಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ. ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಆಸೆ ಒಂದೇ 2018ರಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದು ಎಂದು ಹೇಳಿದರು.
ರಾಜಕೀಯ ಪ್ರಾರಂಭಿಸಿದ ನಂತರ ತಾಲ್ಲೂಕು ಬೋರ್ಡ್ ಉಪಾಧ್ಯಕ್ಷನಾಗಿ 2 ಬಾರಿ, ಜಿಲ್ಲಾ ಪರಿಷತ್ ಸದಸ್ಯನಾಗಿ ಹಾಗೂ ಶಾಸಕನನ್ನಾಗಿ ಜನರು ಆಯ್ಕೆಮಾಡಿದ್ದಾರೆ. ಅದರಂತೆ ತಾಲ್ಲೂಕಿನ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದರು.
ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿದರು. ಚಿಕ್ಕಣ್ಣ ಕಚೇರಿಗೆ ಬರುವ ಮುನ್ನ ಗಣಪತಿ ಹೋಮ ನಡೆಸಲಾಯಿತು. ಬಿ.ಎಂ.ಶಂಕರಲಿಂಗೇಗೌಡ, ದಾಸಪ್ಪ, ಮಹದೇವು, ಮಹೇಶ್, ಡ್ರಿಪ್ ಗುರುಸ್ವಾಮಿ ಇವರು ಬಿಜೆಪಿ ಪಕ್ಷದಿಂದ ಜೆಡಿಎಸ್ಗೆ ಸೇರ್ಪಡೆಗೊಂಡರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ್, ಸದಸ್ಯರಾದ ಪರಿಮಳಶ್ಯಾಮ್, ಎಂ.ಪಿ.ನಾಗರಾಜು, ಸಿ.ವಿ.ನಾಗರಾಜು, ಸಿ.ಎನ್.ನರಸಿಂಹೇಗೌಡ, ಶಂಭುಗೌಡ, ತಾಲ್ಲೂಕು ಸ್ಥಾಯಿ ಸಮಿತಿ ಆಧ್ಯಕ್ಷ ಶಂಭೇಗೌಡ,, ಹೊ.ಕೆ.ಮಹೇಂದ್ರ, ಚಾ.ನಂಜುಂಡಮೂರ್ತಿ, ಮಾರುತಿಗೌಡ, ಭಾಸ್ಕರ್, ಹರೀಶ್, ಮಟಕೆರೆ ರಾಜೇಶ್, ಮಳಲಿಶಾಂತ, ವಿವೇಕ್ ಕಾರ್ಯಾಪ್ಪ, ಗೋಪಾಲಸ್ವಾಮಿ, ಶಿವಯ್ಯ, ಶಫೀಉಲ್ಲಾ, ಚಾಕಹಳ್ಳಿ ಕೃಷ್ಣ, ರಾಜೇಗೌಡ, ಕುಮಾರ್, ಸಿದ್ದೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.