ADVERTISEMENT

‘ಆಧುನಿಕವಾಗಿ ಕುರಿ ಫಾರಂ ನಿರ್ಮಿಸಿ’

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 5:08 IST
Last Updated 1 ಡಿಸೆಂಬರ್ 2017, 5:08 IST
ಕನಕಪುರ ನಗರದ ಆರ್.ಇ.ಎಸ್.ಮೈದಾನದಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕುರಿ ಪೋಷಕರ ಸಂಘದ ವತಿಯಿಂದ ರಿಯಾಯತಿ ದರದಲ್ಲಿ ರೈತರಿಗೆ ಟಗರುಗಳನ್ನು ವಿಧಾನ ಪರಿಷತ್ ಸದಸ್ಯ ಎಸ್.ರವಿ ವಿತರಿಸಿದರು
ಕನಕಪುರ ನಗರದ ಆರ್.ಇ.ಎಸ್.ಮೈದಾನದಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕುರಿ ಪೋಷಕರ ಸಂಘದ ವತಿಯಿಂದ ರಿಯಾಯತಿ ದರದಲ್ಲಿ ರೈತರಿಗೆ ಟಗರುಗಳನ್ನು ವಿಧಾನ ಪರಿಷತ್ ಸದಸ್ಯ ಎಸ್.ರವಿ ವಿತರಿಸಿದರು   

ಕನಕಪುರ: ಸಮೃದ್ಧ ಕರ್ನಾಟಕದ ಕನಸು ನನಸಾಗಬೇಕಾದರೆ ದೇಶದ ಬೆನ್ನೆಲುಬಾದ ರೈತ ಆರ್ಥಿಕವಾಗಿ ಪ್ರಗತಿಯಾಗ ಬೇಕೆಂದು ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಅಭಿಪ್ರಾಯಪಟ್ಟರು. ನಗರದ ರೂರಲ್‌ ಎಜುಕೇಷನ್‌ ಸೊಸೈಟಿಯ ಮೈದಾನದಲ್ಲಿ ಗುರುವಾರ ಬೆಂಗಳೂರು ನಗರ ಹಾಗೂ ಗ್ರಾಮಾಂತರ‌ ಜಿಲ್ಲಾ ಕುರಿ ಪೋಷಕರ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಿಯಾಯತಿಯಲ್ಲಿ ರೈತರಿಗೆ ಸಮೃದ್ಧ ಸಂತಾನಭಿವೃದ್ಧಿ ಟಗರುಗಳನ್ನು ವಿತರಣೆ ಮಾಡಿ ಮಾತನಾಡಿದರು.

ಕುರಿ ಸಾಕಾಣಿಕೆ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ರೈತರು ಹಿಂದಿನ ಪದ್ಧತಿ ಕೈ ಬಿಟ್ಟು ಆಧುನಿಕ ರೀತಿಯಲ್ಲಿ ಕುರಿ ಫಾರಂ ನಿರ್ಮಿಸಿ ಸಾಕಾಣಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಕಡಿಮೆ ಖರ್ಚಿನಲ್ಲಿ ಉದ್ಯಮ ಮಾಡಬಹುದು ಹೇಳಿದರು. ತಾಲ್ಲೂಕಿನಲ್ಲಿ ಕುರಿ ಪೋಷಕರ ಸಂಘ ಕಳೆದ ಎರಡು ಮೂರು ವರ್ಷಗಳಿಂದ ನಿಷ್ಕ್ರಿಯವಾಗಿತ್ತು. ಸಂಘ ಯಾವುದೇ ಕಾರ್ಯಕ್ರಮ ರೂಪಿಸುತ್ತಿರಲಿಲ್ಲ. ಈಚೆಗೆ ಸಂಘದ ಅಡಳಿತ ಮಂಡಳಿ ಬದಲಾಯಿಸಿ ಹೊಸಬರಿಗೆ ಅವಕಾಶ ಕೊಟ್ಟ ನಂತರಸಕ್ರಿಯವಾಗಿ ಸಂಘದ ಅಧ್ಯಕ್ಷ ಗೋಪಾಲ್‌ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಒಂದು ತಿಂಗಳಲ್ಲೇ ಸಂಘದಿಂದ ಇಚಿಡಿನ್‌ ಕೌನ್ಸಿಲ್‌ ಆಫ್‌ ಅಗ್ರಿಕಲ್ಚರ್‌ ರೀಸರ್ಚ್‌ ಸೌತನರ್‌ ರೀಜನಲ್‌ ರಿಸರ್ಚ್‌ ಸೆಂಟರ್‌ನಿಂದ ಅಭಿವೃದ್ಧಿ ಪಡಿಸಿದ ಬಿತ್ತನೆ ಗಂಡು ಮತ್ತು ಹೆಣ್ಣು ಕುರಿ ಕೊಡಲಾಗುತ್ತಿದೆ. ರಿಯಾಯಿತಿ ದರದಲ್ಲಿ ಸಿಗುವ ಉತ್ತಮ ತಳಿ ಕುರಿಗಳನ್ನು ರೈತರು ಸಾಕಾಣಿಕೆ ಮಾಡಿ ಅಭಿವೃದ್ಧಿಯಾಗಬೇಕೆಂದು ಸಲಹೆ ನೀಡಿದರು.

ADVERTISEMENT

ಕಾಂಗ್ರೆಸ್‌ ಮುಖಂಡ ಎಂ.ಪುರುಷೋತ್ತಮ್‌ ಮಾತನಾಡಿ. ಮೆರಿನೋ ಮತ್ತು ಅವಕೆಲಿನ್‌ ತಳಿಗಳಲ್ಲಿ ಉತ್ಕೃಷ್ಟವಾದ ಮಾಂಸ ಮತ್ತು ಉಣ್ಣೆ ಸಿಗುತ್ತದೆ. ರೈತರು ಈ ತಳಿಗಳನ್ನು ಸ್ಥಳೀಯ ತಳಿಗಳೊಂದಿಗೆ ಬ್ರೀಡ್‌ ಮಾಡಿದಾಗ 70ರಿಂದ 80ಕೆ.ಜಿ.ಯಷ್ಟು ತೂಕ ಮತ್ತು 2ರಿಂದ 4ಕೆ.ಜಿ.ಯಷ್ಟು ಉಣ್ಣೆ ಸಿಗುತ್ತದೆ. ಇದರಿಂದ ಕುರಿ ಸಾಕುವವರಿಗೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ತೊಪ್ಪಗನಹಳ್ಳಿ ರಾಜಗೋಪಾಲ್‌ ಮಾತನಾಡಿ. ಸಂಘದಲ್ಲಿ 1150 ಸದಸ್ಯರಿದ್ದು ಆಸಕ್ತ ರೈತರಿಗೆ ರಿಯಾಯಿತಿ ದರದಲ್ಲಿ ಅಭಿವೃದ್ಧಿ ಪಡಿಸಿದ ಬಿತ್ತನೆ ಮರಿ ಕೊಡಲಾಗುತ್ತಿದೆ. ಮೊದಲಿಗೆ 18 ಹೆಣ್ಣು ಮತ್ತು 18 ಗಂಡು ಮರಿಗಳನ್ನು ಕೊಡಲಾಗಿದೆ. ಮುಂದಿನ ದಿನಗಳಲ್ಲಿ ರಾಜಸ್ಥಾನ, ಹರಿಯಾಣ ಮೂಲದ ಇಸಾರ್‌ ಹಾಗೂ ರಾಯಂಬುಲೇಟ್‌ ತಳಿಗಳನ್ನು ನೀಡಲಾಗುವುದು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಎ.ಸಿ. ಶಿವಲಿಂಗಯ್ಯ, ಕಾರ್ಯದರ್ಶಿ ಕೆ.ಪಿ. ಶಿವಕಾಂತ್, ನಿರ್ದೇಶಕರಾದ ಕೆ.ಜಿ.ದೇವರಾಜು, ಮೋಹನ್, ಬೋರಶೆಟ್ಟಿ, ಹಲಗಪ್ಪ, ಟಿ.ಕೆ. ನಾಗರಾಜು, ಕಾಂಗ್ರಸ್ ಮುಖಂಡರಾದ ರಾಯಸಂದ್ರರವಿ, ಕುಂತಿಕಲ್‌ದೊಡ್ಡಿ ಬಸವರಾಜು, ಸಂಘದ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.