ADVERTISEMENT

ಕಾಮಗಾರಿ ಕಳಪೆ; ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 6:15 IST
Last Updated 19 ಜುಲೈ 2017, 6:15 IST
ಸಿಂಧನೂರಿನಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿ ಮುಖಂಡರು ವಿವಿಧ ಕಾಮಗಾರಿಗಳನ್ನು ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಸಿಂಧನೂರಿನಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿ ಮುಖಂಡರು ವಿವಿಧ ಕಾಮಗಾರಿಗಳನ್ನು ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಸಿಂಧನೂರು: ನಗರದಲ್ಲಿ ಎರಡು ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ, 24X7 ಕುಡಿಯುವ ನೀರು ಮತ್ತು ವಿವಿಧ ಯೋಜನೆಯಡಿಯಲ್ಲಿ ಕೈಗೊಂಡಿರುವ ರಸ್ತೆ, ಚರಂಡಿ ಕಾಮಗಾರಿಗಳು ಕಳಪೆಯಿಂದ ಕೊಡಿವೆ. ವಿಶೇಷ ತಾಂತ್ರಿಕ ಸಮಿತಿ ರಚಿಸಿ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಮಂಗಳವಾರ ನಗರಾಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘ-–ಸಂಸ್ಥೆಗಳ ಮುಖಂಡರು  ಪ್ರತಿಭಟನೆ ನಡೆಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಮಾಯಿಸಿದ ನೂರಾರು ನಾಗರಿಕರು ಮೆರವಣಿಗೆ ಮೂಲಕ ಮಹಾತ್ಮಗಾಂಧಿ ವೃತ್ತಕ್ಕೆ ಬಂದು ಹೆಚ್ಚಿನ ನಗರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ವಿ.ವಿ.ನಗರ, ಮಾರ್ವಾಡಿಗಲ್ಲಿ, ಹಳೆಬಜಾರ ರಸ್ತೆ, ರಾಣಿಚೆನ್ನಮ್ಮ ವೃತ್ತದ ಮೂಲಕ ನಗರಸಭೆ ಕಚೇರಿ ಬಳಿ ಬಂದರು. ಪ್ರತಿಭಟನಾಕಾರರನ್ನು ಕಚೇರಿಯ ಒಳಗೆ ಪ್ರವೇಶಿಸದಂತೆ ಪೊಲೀಸರು ತಡೆದರು. ಈ ಮಧ್ಯೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಬಾಗಿಲು ಬಳಿ ಕುಳಿತ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಬಂದ ಪ್ರಭಾರಿ ತಹಶೀಲ್ದಾರ್ ಶಂಶಾಲಂ ಜಿಲ್ಲಾಧಿಕಾರಿಗೆ ಬೇರೆ ಕೆಲಸವಿರುವದರಿಂದ ಬರಲಾಗುವುದಿಲ್ಲ ಎಂದು ತಿಳಿಸಿದರು. ಒಪ್ಪದ ಪ್ರತಿಭಟನಾಕಾರರು ಲಿಂಗಸುಗೂರು ಉಪವಿಭಾಗಾಧಿಕಾರಿ ಬರಬೇಕೆಂದು ಪಟ್ಟು ಹಿಡಿದರು.

ಆಗ ಪ್ರಭಾರಿ ತಹಶೀಲ್ದಾರ್‌ ಎಸಿ ದಿವ್ಯಪ್ರಭು ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಹೋರಾಟ ಸಮಿತಿ ಮುಖಂಡರ ಜತೆ ಮಾತನಾಡಿಸಿದರು. ಜುಲೈ19 ರಂದು ಸಿಂಧನೂರಿನ ಮಿನಿವಿಧಾನಸೌಧ ಕಚೇರಿಗೆ ಬಂದು ಹೋರಾಟ ಸಮಿತಿ ಮುಖಂಡರೊಂದಿಗೆ ಚರ್ಚಿಸಿ ಕಳಪೆ ಕಾಮಗಾರಿಗಳ ತನಿಖೆಗೆ ವಿಶೇಷ ತಂಡ ನೇಮಿಸುವುದಾಗಿ ಎಸಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.

ಸಂಚಾಲಕರಾದ ಎಸ್.ದೇವೇಂದ್ರ ಗೌಡ, ವೆಂಕನಗೌಡ ಗದ್ರಟಗಿ, ಗುಂಡಪ್ಪ ಬಳಿಗಾರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮಿನಪಾಷ ದಿದ್ದಿಗಿ ಮಾತನಾಡಿದರು.

ಮುಖಂಡ ರಾದ ನರಸಿಂಹಪ್ಪ, ಬಸವರಾಜ ಬಾದರ್ಲಿ, ಡಾ.ತಾಹೇರ್ಅಲಿ, ಕರೇಗೌಡ ಕುರಕುಂದಿ, ಶಂಕರ ಗುರಿಕಾರ, ಯಾಖೂಬ್ಅಲಿ, ಖಾನ್‌ಸಾಬ, ಅನ್ವರ್‌ಮಿಯಾ, ಕೆ.ಬಸವರಾಜ, ಗಂಗಣ್ಣ ಡಿಶ್, ದಾವಲಸಾಬ ದೊಡ್ಮನಿ, ನಾರಾಯಣ ಬೆಳಗುರ್ಕಿ, ಶಂಕರ ವಾಲೇಕಾರ್, ಅಪ್ಪಣ್ಣ ಕಾಂಬಳೆ, ಮೌನೇಶ ದೊರೆ, ಸುರೇಶ ಕಟ್ಟಿಮನಿ, ಮರಿಯಪ್ಪ ಬಂಡಿ, ಮಹೇಶ, ಚಂದಪ್ಪ, ಹಮಾಲರ ಸಂಘದ ಶರಣಪ್ಪ, ದವಲವಲಿ, ತನ್ವೀರ್, ಸೈಲಾನಿಪಾಷಾ, ರಾಜಾಸಾಬ, ಅನಂತ ಮಂದಿರೆ, ದುರುಗೇಶ, ಅಮೀನಪಾಷಾ ಗಾದಿ, ಮುತ್ತು ಪಾಟೀಲ್, ಹುಸೇನಪ್ಪ ನಂಜಲದಿನ್ನಿ ಇದ್ದರು.

* * 

ರಸ್ತೆಗಳು ಹಾಳಾಗಿವೆ. ಚರಂಡಿ, ವಿದ್ಯುತ್ ದೀಪ ಮತ್ತಿತರ ಮೂಲಸೌಕರ್ಯಗಳು ಕಲ್ಪಿಸುವಲ್ಲಿ ನಗರಸಭೆ ವಿಫಲವಾಗಿದೆ
ಚಂದ್ರಶೇಖರ ಗೊರಬಾಳ
ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.