ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಆಡಳಿತ ವರ್ಗ ಬೇಡಿಕೆಗಳನ್ನು ಈಡೇರಿಸಲು ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳು ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.
‘ವೈದ್ಯಕೀಯ ಆಧಾರ ಮೇಲೆ ನಿವೃತ್ತಿ ಹೊಂದಿದ 186 ಕಾರ್ಮಿಕರ ಮಕ್ಕಳಿಗೆ ನೌಕರಿ ನೀಡಬೇಕು. ಬೋನಸ್ ನೀಡಬೇಕು. 19 ಜನ ಗುತ್ತಿಗೆ ಆರೋಗ್ಯ ಸಹಾಯಕಿಯರನ್ನು ಕಾಯಂ ಗೊಳಿಸಬೇಕು. 163 ಊಟಿ ಗಣಿಯ ಕಾರ್ಮಿಕರನ್ನು ಮರು ವರ್ಗಾವಣೆ ಮಾಡಬೇಕು. ಸಹಕಾರಿ ಸಂಘದ ಸಿಬ್ಬಂದಿಯನ್ನು ಕಂಪೆನಿ ನೌಕರರೆಂದು ಪರಿಗಣಿಸಬೇಕು’ ಎಂಬ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ಆರಂಭಿಸಲಾಗಿದೆ.
‘ಈ ಕುರಿತು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದಾಗ 10 ದಿನಗಳು ಕಾಲವಕಾಶ ಕೇಳಿದ್ದರು. ಆದರೆ ಇಲ್ಲಿವರೆಗೆ ಕ್ರಮ ಜರುಗಿಸಿಲ್ಲ’ ಎಂದು ಸಂಘದ ಅಧ್ಯಕ್ಷ ಎಸ್. ಎಂ. ಶಫಿ ಆರೋಪಿಸಿದ್ದಾರೆ.
‘12ನೇ ಜುಲೈಗೆ ಕಾರ್ಮಿಕ ಸಂಘದ ಚುನಾಯಿತ ಪ್ರತಿನಿಧಗಳ ಅಧಿಕಾರ ಅವಧಿ ಮುಕ್ತಾಯಗೊಳ್ಳುತ್ತದೆ. 5ನೇ ಜುಲೈಗೆ ನಡೆದ ಎಐಟಿಯುಸಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಲು ಪತ್ರ ನೀಡಲಾಗುವುದು’ ಎಂದು ಹೇಳಿದರು. ಚಂದ್ರಶೇಖರ, ಹುಸೇನ್ ಸಾಬ್, ಯಮನಪ್ಪ, ಯಂಕಪ್ಪ ಮೊದಲನೇ ದಿನ ಉಪವಾಸ ಸತ್ಯಾಗ್ರಹ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.