ADVERTISEMENT

ದಲಿತ ಸಾಹಿತಿಗಳ ಕಡೆಗಣನೆ: ಕಳವಳ

ದಲಿತ ಚಳವಳಿ– ಸಾಹಿತ್ಯಕ್ಕೆ ರಾಯಚೂರು ಕೊಡುಗೆ ಅಪಾರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 7:10 IST
Last Updated 6 ಮಾರ್ಚ್ 2017, 7:10 IST
ಲಿಂಗಸುಗೂರು: ದಾಸ ಮತ್ತು ವಚನ ಸಾಹಿತ್ಯದ ಹೆಸರಿನಲ್ಲಿ ಬಂಡಾಯ ಮತ್ತು ದಲಿತ ಸಾಹಿತಿಗಳನ್ನು ಕಟ್ಟಿಹಾಕುವ ಯತ್ನ ನಡೆದಿದೆ. ದಾಸ–ವಚನ ಸಾಹಿತ್ಯದ ಅಬ್ಬರದಲ್ಲಿ ದಲಿತ ಸಾಹಿತ್ಯ ಮತ್ತು ಸಾಹಿತಿಗಳಿಗೆ ವಂಚನೆ ಆಗುತ್ತಿದೆ ಎಂದು ಟಿಯುಸಿಐ ರಾಜ್ಯ ಅಧ್ಯಕ್ಷ ಆರ್‌. ಮಾನಸಯ್ಯ ಕಳವಳ ವ್ಯಕ್ತಪಡಿಸಿದರು.
 
ಭಾನುವಾರ ಜಿಲ್ಲಾ ಮಟ್ಟದ ದಲಿತ ಕವಿಗೋಷ್ಠಿಯಲ್ಲಿ ಮಾತನಾಡಿ, ಆಯಾ ಕಾಲಘಟ್ಟದಲ್ಲಿ ದಲಿತರು ರಚಿಸಿದ ಸಾಹಿತ್ಯ ಗೌಡ್ರು, ದೇಸಾಯಿ, ಪೊಲೀಸರ ದಬ್ಬಾಳಿಕೆಯಲ್ಲಿ ನಶಿಸಿದೆ. ವಿಶ್ವಜ್ಯೋತಿ ಬಸವೇಶ್ವರರನ್ನು ಕಾಮ್ರೇಡ್‌ ಎಂದು ಕರೆಯುವುದರಲ್ಲಿ ತಪ್ಪೇನಿದೆ.
ಆದರೆ, ಇದನ್ನು ಕೆಲ ಲಿಂಗಾಯತ ಶಕ್ತಿಗಳು ವಿರೋಧಿಸುತ್ತಿದ್ದು ಅಲ್ಲಿಯೂ ದಲಿತರನ್ನು ತುಳಿಯುವ ತಂತ್ರಗಾರಿಕೆ ನಡೆಯುತ್ತಿದೆ ಎಂದರು.
 
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ವಡ್ಡಗೆರೆ ನಾಗರಾಜಯ್ಯ ಮಾತನಾಡಿ,70ರ ದಶಕದಲ್ಲಿ ರಾಯಚೂರು ರೈತ ಮತ್ತು ದಲಿಪರ ಸಂಘಟನೆಗಳ ತವರು ಕ್ಷೇತ್ರವಾಗಿತ್ತು. ಲಿಂಗಸುಗೂರು ತಾಲ್ಲೂಕು ಅನೇಕ ಭೂಹೋರಾಟಗಳನ್ನು ನಡೆಸುತ್ತ, ಸಾಹಿತ್ಯ ಕ್ಷೇತ್ರಕ್ಕೆ ಮಹಾ ಕೊಡುಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದರು.
 
ದಲಿತ ಕೂಗು ಕವಲ ಸಂಕಲನ ಬಿಡುಗಡೆ ಮಾಡಿದ ಸಾಹಿತಿ ಬಾಬು ಬಂಡಾರಿಗಲ್‌, ಡಾ.ಮಹಾಂತೇಶ ಪಾಟೀಲ ಮಾತನಾಡಿ, ದಲಿತರ ಕೂಗು ಕವನ ಸಂಕಲನ ಶೋಷಿತರ, ನೊಂದ ವರ ಧ್ವನಿಯಾಗಿ ಪ್ರಕಟಗೊಂಡಿದೆ. ಕೆಲ ಕವಿಗಳು ಆವೇಶಭರಿತ ಶಬ್ದಗಳಿಗೆ ಒತ್ತು ನೀಡಿದ್ದು ಕಂಡುಬರುತ್ತಿದೆ. ದಲಿತ ಸಾಹಿತ್ಯವನ್ನು ಪ್ರತ್ಯೇಕಿಸಿ ವಿಶಿಷ್ಟವಾದ ನೆಲೆಗಟ್ಟು ಕಟ್ಟಲು ಈ ವೇದಿಕೆ ಸಹಕಾರಿ ಆಗಲಿ ಎಂದರು.
 
ಸಂತಾಪ ಮತ್ತು ಸನ್ಮಾನ: ದಲಿತ ಸಾಹಿತಿ ಜಂಬಣ್ಣ ಅಮರಚಿಂತ ಅವರಿಗೆ ಸಂತಾಪ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರು, ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.
 
ದಲಿತ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ ಅಮರೇಶ ವೆಂಕಟಾಪುರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ತಾಯರಾಜ ಮರ್ಚಟ್ಹಾಳ, ಸಿ. ದಾನಪ್ಪ ಮಸ್ಕಿ, ಹುಸೇನಪ್ಪ ಅಮರಾಪುರ, ಕೊರೆನಲ್‌, ಸಂಗಣ್ಣ ದೇಸಾಯಿ ವೇದಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.