ADVERTISEMENT

ನೀರಾವರಿ ಇದ್ದರೂ ಮೂಲಸೌಕರ್ಯ ಕೊರತೆ

ಮಂಜುನಾಥ ಎನ್ ಬಳ್ಳಾರಿ
Published 17 ಅಕ್ಟೋಬರ್ 2017, 8:53 IST
Last Updated 17 ಅಕ್ಟೋಬರ್ 2017, 8:53 IST

ಕವಿತಾಳ: ಸಂಪೂರ್ಣ ನೀರಾವರಿ ಸೌಲಭ್ಯ ಹೊಂದಿದ ಅತ್ಯಂತ ಹೆಚ್ಚಿನ ಬತ್ತ ಬೆಳೆಯುವ ಸಮೀಪದ ಬಾಗಲವಾಡ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಬಹುತೇಕ ಓಣಿಗಳಲ್ಲಿ ಚರಂಡಿಗಳ ಸ್ವಚ್ಛತೆ ಮರೀಚಿಕೆಯಾಗಿದೆ ಸೊಳ್ಳೆಗಳ ಕಾಟದಿಂದ ನಾಗರಿಕರು ಬೇಸತ್ತಿದ್ದಾರೆ. ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿರುವುದರಿಂದ ರಸ್ತೆಗಳು ಹದಗೆಟ್ಟು ಓಣಿಗಳಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿದೆ.

ಅಂದಾಜು 12 ಸಾವಿರ ಜನಸಂಖ್ಯೆ ಇದ್ದು, 19 ಗ್ರಾಮ ಪಂಚಾಯಿತಿ ಸದಸ್ಯರನ್ನು ಒಳಗೊಂಡ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಇದಾಗಿದೆ.
ಗ್ರಾಮದಲ್ಲಿ 3 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಸರ್ಕಾರಿ ಪ್ರೌಢಶಾಲೆ ಹಾಗೂ 3 ಖಾಸಗಿ ಶಾಲೆಗಳಿವೆ. ಅಂದಾಜು 1 ಕಿ.ಮೀ ಮುಖ್ಯರಸ್ತೆಯಲ್ಲಿ ಹತ್ತಕ್ಕೂ ಹೆಚ್ಚು ಕಡೆ ಅವೈಜ್ಞಾನಿಕ ರಸ್ತೆ ಜಂಪ್‌ಗಳನ್ನು ಹಾಕಲಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಚರಂಡಿ ಅವ್ಯವಸ್ಥೆ ಮತ್ತು ಸುತ್ತಮುತ್ತಲು ಬತ್ತದ ಗದ್ದೆಗಳಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದ್ದು, ಮಲೇರಿಯಾ, ಡೆಂಗೆ ಭಯದಲ್ಲಿ ಜನರು ಜೀವಿಸುವಂತಾಗಿದೆ. ಜಾನುವಾರುಗಳಿಗೆ ಸೊಳ್ಳೆಪರದೆ ಕಟ್ಟಬೇಕಾದ ಅನಿವಾರ್ತೆ ಇದೆ.

ADVERTISEMENT

ಮುಖ್ಯ ರಸ್ತೆ ಬದಿಗೆ ಹೊಂದಿಕೊಂಡಿರುವ ಸಂತೆ ಮಾರುಕಟ್ಟೆಗೆ ಮೂಲಸೌಲಭ್ಯಗಳ ಕೊರತೆ ಇದೆ. ಪ್ರಮುಖವಾಗಿ ಕಾಂಪೌಂಡ್ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ಜನತಾ ಕಾಲೊನಿ ಸಮೀಪದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಬೇಕು. ಅಪೂರ್ಣವಾದ ಕಾಂಕ್ರೀಟ್‌ ರಸ್ತೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಚರಂಡಿ ಸ್ವಚ್ಛ
ಗೊಳಿಸುವುದು, ಸೊಳ್ಳಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡುವುದು, ಪಶು ವೈದ್ಯರ ನೇಮಕ ಮತ್ತು ಸಂತೆ ಮಾರುಕಟ್ಟೆಗೆ ಕಾಂಪೌಂಡ್ ನಿರ್ಮಾಣ ಮತ್ತು ಪ್ರಮುಖ ರಸ್ತೆಗಳ ಬದಿಯಲ್ಲಿ ಬೆಳೆದ ಮುಳ್ಳುಗಿಡಗಳ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು ಎಂದು ಗ್ರಾಮದ ಚೆನ್ನಬಸವ, ಮಾರೆಪ್ಪ ನಾಯಕ, ಗುರಪ್ಪ ಸಾಹುಕಾರ ಮತ್ತು ಮುರಳಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.