ಲಿಂಗಸುಗೂರು: ‘ವೀರಶೈವ ಪರಂಪರೆಯಲ್ಲಿ ಬೆಳೆದು ಬಂದಿರುವ ಜಂಗಮ ಸಮಾಜದವರಯ ತಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು’ ಎಂದು ಬೊಮ್ಮನಹಳ್ಳಿ ಗುರುಶಾಂತ ಶಿವಾಚಾರ್ಯರು ಹೇಳಿದರು.
ಭಾನುವಾರ ಯರಡೋಣ ಕ್ರಾಸ್ನಲ್ಲಿರುವ ಸಿದ್ಧರಾಮೇಶ್ವರ ಗುರುಮಠದಲ್ಲಿ ಮುರುಘರಾಜೇಂದ್ರ ಶ್ರೀ ಗುರುವಂದನಾ ಸಮಾರಂಭದ ನಿಮಿತ್ತ ಆಯೋಜಿಸಿದ್ದ ಜಂಗಮ ವಟುಗಳಿಗೆ ಅಯ್ಯಾಚಾರ (ಪಂಚಾಕ್ಷರಿ ಮಂತ್ರ) ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಕ್ಕಳು ನಿತ್ಯ ಕರ್ಮಾದಿಗಳನ್ನು ಮುಗಿಸಿ, ಸ್ನಾನ ಪೂಜೆ ನಂತರ ಪಂಚಾಕ್ಷರಿಮಂತ್ರ ಪಠಿಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ’ ಎಂದು ಹೇಳಿದರು.
ಮುರುಘರಾಜೇಂದ್ರ ಶರಣರು ಮಾತನಾಡಿ, ‘ವೀರಶೈವ ಪರಂಪರೆ ಯಲ್ಲಿ ಮಗು ಹುಟ್ಟುವ ಮುಂಚೆ ತಾಯಿ ಗರ್ಭಿಣಿಯಿದ್ದಾಗ ಗರ್ಭಕ್ಕೆ ಲಿಂಗಧಾರಣೆ ಮಾಡಲಾಗುತ್ತದೆ. ಮಗು ಹುಟ್ಟಿದ ನಂತರದಲ್ಲಿ ಲಿಂಗಧಾರಣೆ ನಂತರ 8 ವರ್ಷದಿಂದ 16 ವರ್ಷದೊಳಗಿದ್ದಾಗ ಅಯ್ಯಾಚಾರ ದೀಕ್ಷೆ ಮೂಲಕ ಲಿಂಗ ಪೂಜೆ, ಪಂಚಾಕ್ಷರಿ ಮಂತ್ರ ಪಠಣದ ಮಹತ್ವ ಹೇಳಿಕೊಡುವುದು ವಾಡಿಕೆ’ ಎಂದರು.
ಪೂಜಾ ಕೈಂಕರ್ಯ: ಅಯ್ಯಾಚಾರ ದೀಕ್ಷೆ ಕಾರ್ಯಕ್ರಮ ಮುಕ್ತಾಯವಾದ ನಂತರ ಗಂಗಾಧರ ಶಾಸ್ತ್ರಿ ನೇತೃತ್ವದಲ್ಲಿ ಗುರುಗುಂಟಾ ಅಮರೇಶ್ವರ ಸಂಸ್ಕೃತ ವೇದಪಾಠ ಶಾಲಾ ಸಾಧಕರ ಸಹಯೋಗದಲ್ಲಿ ಸಸ್ತಿನಾಂದಿ, ಕಳಸಗಳ ಪೂಜೆ ನೆರವೇರಿಸಿ, ದುರ್ಗಾ ಮತ್ತು ಗಣಪತಿ ಹೋಮಗಳನ್ನು ನಡೆಸಲಾಯಿತು. ನಂತರ ಸಾಧು ಸಂತರಿಗೆ ವಸ್ತ್ರದಾನ ಮಾಡಿ ಅನ್ನಸಂತರ್ಪಣೆ ಮಾಡಲಾಯಿತು.
ಗಂಗಾಧರ ಶಾಸ್ತ್ರಿ ಮಾತನಾಡಿ, ‘ಜಂಗಮರಿಗೆ ಅಯ್ಯಾಚಾರ ಬಹುಮುಖ್ಯವಾದದ್ದು. ಪಂಚಾಕ್ಷರಿ ಮಂತ್ರದ ದೀಕ್ಷೆ ನೀಡಿದ ಗುರುವಿನ ಸ್ಮರಣೆಯಲ್ಲಿ ವಟುಗಳು ನಿತ್ಯ ಪೂಜಾ ಕೈಂಕರ್ಯಗಳನ್ನು ಮಾಡಿಕೊಳ್ಳಬೇಕು. ತಂದೆ, ತಾಯಿ ಹಿರಿಯರಿಗೆ ಗೌರವ ಸಲ್ಲಿಸುವ ಜತೆಗೆ ಧರ್ಮ ಆಧಾರಿತ ಬದುಕು ಕಟ್ಟಿಕೊಳ್ಳಬೇಕು. ಹರಗುರು ಚರಮೂರ್ತಿಗಳ ಮಾರ್ಗದರ್ಶನದಲ್ಲಿ ಸುಂದರ ಬದುಕು ಕಟ್ಟಿಕೊಳ್ಳುವಂತೆ’ ಕಿವಿಮಾತು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.