ADVERTISEMENT

ಮಲಿನಗೊಂಡಿದೆ ಮಾವಿನ ಕೆರೆ ಒಡಲು

ಕುಡಿಯುವ ನೀರಿನ ಸಮಸ್ಯೆ ಉಲ್ಬಣ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 8:11 IST
Last Updated 16 ಜನವರಿ 2017, 8:11 IST
ಮಲಿನಗೊಂಡಿದೆ ಮಾವಿನ ಕೆರೆ ಒಡಲು
ಮಲಿನಗೊಂಡಿದೆ ಮಾವಿನ ಕೆರೆ ಒಡಲು   

ರಾಯಚೂರು: ನಗರದ ಐತಿಹಾಸಿಕ ಮಾವಿನ ಕೆರೆಯ ನೀರು ಸುತ್ತಮುತ್ತಲಿರುವ ಏಳೆಂಟು ಬಡಾವಣೆಗಳಲ್ಲಿರುವ ಕೊಳವೆ ಬಾವಿಗಳಿಗೆ ಅಂತರ್ಜಲದ ಮೂಲ. ಈಗ ಇಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ನೀರಿಗೆ ಹಾಹಾಕಾರ ಶುರುವಾಗಿದೆ. ಅಲ್ಲದೇ, ಕೊಳಚೆ ನೀರಿನಿಂದ ಕೆರೆ ಕಲುಷಿತಗೊಂಡಿದೆ.

ಕೆರೆಯ ಸುತ್ತಮುತ್ತ ಇರುವ ಐಡಿಎಸ್‌ಎಂಟಿ ಬಡಾವಣೆ, ಯರಗೇರಾ ಬಡಾವಣೆ, ಸತ್ಯನಾಥ ಕಾಲೊನಿ, ಈರಣ್ಣ ಕಾಲೊನಿ, ಆಜಾದ್ ನಗರ, ಇಂದಿರಾ ನಗರಗಳಲ್ಲಿ ಕೊರೆಸಿರುವ ಕೊಳವೆಬಾವಿಗಳಿಗೆ ಈ ಕೆರೆಯೇ ಆಧಾರ. ಮಾವಿನ ಕೆರೆಯ ಒಡಲಿಲ್ಲ ನೀರು ಇಂಗುತ್ತಿದ್ದಂತೆ ಸುತ್ತಲಿನ ಬಡಾವಣೆಗಳ ಕೊಳವೆಬಾವಿಗಳು ಬರಿದಾಗುತ್ತವೆ. ಸದ್ಯ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಮೂರ್ನಾಲ್ಕು ದಿನಕ್ಕೊಮ್ಮೆ ನಗರಸಭೆ ನೀರು ಸರಬರಾಜು ಮಾಡುತ್ತಿದೆ.

ನಗರದ 35 ಬಡಾವಣೆಗಳಿಗೆ ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಹಾಗೂ ಕೃಷ್ಣಾ ನದಿಯಿಂದ ನೀರು ಪೂರೈಸಲಾಗುತ್ತದೆ. ಟಿಎಲ್‌ಬಿಸಿಯಿಂದ ಗಣೇಕಲ್‌ ಮತ್ತು ರಾಂಪುರ ಜಲಾಶಯಕ್ಕೆ ನೀರು ಹರಿಸಿ, ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈ ಜಲಾಶಯಗಳ ಲ್ಲಿಯೂ ನೀರು ಖಾಲಿಯಾಗಿರುವುದು ಚಿಂತೆಗೆ ಈಡುಮಾಡಿದೆ.

ಸದ್ಯ ಕೃಷ್ಣಾ ನದಿಯ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯಡಿ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸ­ಲಾ­ಗುತ್ತಿದೆ.  ಕೆರೆ ಪಕ್ಕದಲ್ಲಿ ನಂದೀಶ್ವರ ದೇವಸ್ಥಾನ, ಸಾಯಿಬಾಬಾ ಹಾಗೂ ಉರಕುಂದಿ ಈರಣ್ಣ ದೇವಸ್ಥಾನ ಇದ್ದು, ಅಲ್ಲಿಗೆ ಬರುವ ಭಕ್ತರು ಕೆಟ್ಟ ವಾಸನೆಯಿಂದ ಬೇಸತ್ತಿದ್ದಾರೆ.
 

*

‘ಕಲುಷಿತ ನೀರು ಹೊರಹಾಕಿ ಕೆರೆ ಸೌಂದರ್ಯೀಕರಣ ಮಾಡಬೇಕು’ ಎಂದು ಆಗ್ರಹಿಸುತ್ತಾರೆ ಯರಗೇರಾ ಬಡಾವಣೆಯ ಬಸನಗೌಡ ತುರಕನಡೋಣಿ.
– ಪಿ.ಹನುಮಂತು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.