ADVERTISEMENT

ಮುಚ್ಚಿದ ವಸತಿ ನಿಲಯ: ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 7:22 IST
Last Updated 3 ಸೆಪ್ಟೆಂಬರ್ 2017, 7:22 IST
ಲಿಂಗಸುಗೂರು ಇಲ್ಲಿನ ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ ಮುಚ್ಚಿದರಿಂದ ವಸತಿ ನಿಲಯದ ವಿದ್ಯಾರ್ಥಿಗಳು ಶನಿವಾರ ಊಟಕ್ಕಾಗಿ ಪರದಾಡಿದರು
ಲಿಂಗಸುಗೂರು ಇಲ್ಲಿನ ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ ಮುಚ್ಚಿದರಿಂದ ವಸತಿ ನಿಲಯದ ವಿದ್ಯಾರ್ಥಿಗಳು ಶನಿವಾರ ಊಟಕ್ಕಾಗಿ ಪರದಾಡಿದರು   

ಲಿಂಗಸುಗೂರು: ಇಲ್ಲಿನ ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ ಮುಚ್ಚಿದರಿಂದ ವಸತಿ ನಿಲಯದ ವಿದ್ಯಾರ್ಥಿಗಳು ಶನಿವಾರ ಊಟಕ್ಕಾಗಿ ಪರದಾಡುವಂತಾಗಿದೆ. ಬಕ್ರೀದ್ ಹಬ್ಬದ ನಿಮಿತ್ತ ನಿಲಯಕ್ಕೆ ಮೇಲ್ವಿಚಾರಕರು ಬಾರದೇ ಅನಧಿಕೃತ ರಜೆ ಘೋಷಣೆ ಮಾಡಿದ್ದಾರೆ. ಇದರಿಂದ ನಿಲಯದಲ್ಲಿದ್ದ 50 ವಿದ್ಯಾರ್ಥಿಗಳ ಪೈಕಿ 39 ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳಿದ್ದಾರೆ. 11 ಜನ ವಿದ್ಯಾರ್ಥಿಗಳು ನಿಲಯದಲ್ಲಿಯೇ ಉಳಿದಿದ್ದೇವೆ. ಆದರೆ ನಿಲಯಕ್ಕೆ ಅಡುಗೆದಾರರು ಬಂದಿಲ್ಲ. ಬೆಳಗಿನ ಉಪಹಾರ, ಹಾಗೂ ಊಟದ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ಪಕ್ಕದ ತಾಲ್ಲೂಕು ಅಲ್ಪಸಂಖ್ಯಾತ ವಸತಿ ನಿಲಯಗಳ ವಾರ್ಡನ್ ಮತ್ತು ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ವಸತಿ ನಿಲಯಕ್ಕೆ ರಜೆ ಘೋಷಣೆ ಮಾಡಿಲ್ಲ ಎಂದು ಹೇಳಿದರು. ಜಿಲ್ಲಾಧಿಕಾರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ವಿದ್ಯಾರ್ಥಿನಿಲಯಕ್ಕೆ ರಜೆ ನೀಡಲು ಬರುವುದಿಲ್ಲ ಎಂದು ಹೇಳಿದರು.

ಇಷ್ಟಾದರೂ ನಿಲಯದ ಮೇಲ್ವಿಚಾರಕ ಷಡಕ್ಷರಿ ಅವರು ರಜೆ ಘೋಷಣೆ ಮಾಡಿದ್ದಾರೆ. ಅಧಿಕಾರಿಗಳು ಶೀಘ್ರವೇ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ನಿಲಯದ ವಿದ್ಯಾರ್ಥಿಗಳಾದ ಗೋಕಲಸಾಬ, ಅಮೀನಸಾಬ, ಸದ್ದಾಮ್, ಯಾಸೀನ್, ಮೀಯಾಸಾಬ, ನಬಿಸಾಬ, ರಾಜಾಸಾಬ, ಲಾಲಸಾಬ ಒತ್ತಾಯಿಸಿದರು.

ADVERTISEMENT

‘ಮುಸ್ಲಿಂ ಸಮಾಜಕ್ಕೆ ಸೇರಿದ ಅಡುಗೆ ಸಿಬ್ಬಂದಿ ಬಕ್ರಿದ್‌ ನಿಮಿತ್ತ ರಜೆ ನೀಡುವಂತೆ ಮನವಿ ಮಾಡಿದ್ದರಿಂದ ವಿದ್ಯಾರ್ಥಿಗಳನ್ನು ಊರಿಗೆ ತೆರಳುವಂತೆ ಸೂಚಿಸಿದೆ. ಕೆಲ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಉಳಿದುಕೊಂಡಿದ್ದರಿಂದ ಬೆಳಿಗ್ಗೆ ಹಾಗೂ ಮಧ್ಯಾಹ್ನ ಊಟಕ್ಕೆ ತೊಂದರೆಯಾಗಿದೆ. ಸಂಜೆ ವೇಳೆ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ನಿಲಯದ ಮೇಲ್ವಿಚಾರಕ ಷಡಕ್ಷರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.