ADVERTISEMENT

ರೈತರ 11 ಟ್ರ್ಯಾಕ್ಟರ್‌ಗಳ ವಶ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 5:49 IST
Last Updated 9 ಜನವರಿ 2017, 5:49 IST

ರಾಯಚೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಾಲ ಮರು ಪಾವತಿ ಮಾಡದ ರೈತರಿಂದ ಟ್ರ್ಯಾಕ್ಟರ್‌ಗಳನ್ನು  ಬ್ಯಾಂಕ್‌ ಅಧಿಕಾರಿಗಳು ಏಜೆಂಟ್‌ರ ಮೂಲಕ ವಶ ಪಡಿಸಿಕೊಂಡ ಘಟನೆ ನಡೆದಿದೆ.

ತಾಲ್ಲೂಕಿನ ಮುಮದಾಪುರ ಗ್ರಾಮದ ಈರಪ್ಪ ಹಾಗೂ ಬಸಪ್ಪ ಅವರು 2007ರಲ್ಲಿ ಎಸ್‌ಬಿಎಚ್‌ ಬ್ಯಾಂಕಿನಲ್ಲಿ ಮಧ್ಯವರ್ತಿಗಳ ಮೂಲಕ ಟ್ರ್ಯಾಕ್ಟರ್‌ ಖರೀದಿಸಲು ತಲಾ ₹5.80 ಲಕ್ಷ ಸಾಲ ಪಡೆದಿದ್ದರು. ಎರಡು ವರ್ಷಗಳವರೆಗೆ ಕಂತುಗಳನ್ನು ಕಟ್ಟಿದ್ದಾರೆ. ನಂತರ ದಿನಗಳಲ್ಲಿ ಬೆಳೆ ನಷ್ಟಕ್ಕೀಡಾದ ಕಾರಣ ಸಾಲದ ಕಂತು ಕಟ್ಟಿಲ್ಲ. ಬ್ಯಾಂಕಿನವರು ಸಾಲ ಮರುಪಾವತಿಗೆ ನೊಟೀಸ್‌ ನೀಡಿದ್ದಾರೆ. ಆದರೂ, ರೈತರು ಸಾಲ ಮರು ಪಾವತಿ ಮಾಡಿಲ್ಲ. ಈ ನಡುವೆ ಸಾಲದ ಬಡ್ಡಿ ಬೆಳೆದು ಒಟ್ಟು ಸಾಲ ₹12 ಲಕ್ಷಕ್ಕೆ ಬೆಳೆದಿದೆ. ಇದರ ಪರಿಣಾಮ ಬ್ಯಾಂಕಿನ ಅಧಿಕಾರಿಗಳು ಏಜೆಂಟರ್‌ ಮೂಲಕ ಟ್ರ್ಯಾಕ್ಟರ್‌ ಜಪ್ತಿಗೆ ಮುಂದಾಗಿದ್ದಾರೆ.

ಇದೇ ರೀತಿ ವಿವಿಧ ಗ್ರಾಮಗಳ 8 ಮಂದಿ ರೈತರಿಗೆ ಸೇರಿದ 11 ಟ್ರ್ಯಾಕ್ಟರ್‌ಗಳನ್ನು ಏಜೆಂಟ್‌ರು ವಶಪಡಿಸಿಕೊಂಡಿದ್ದಾರೆ.  ವಶಪಡಿಸಿಕೊಂಡಿರುವ ಟ್ರ್ಯಾಕ್ಟರ್‌ಗಳನ್ನು ನಗರದ ಸಮೀಪವಿರುವ ರಾಂಪುರದಲ್ಲಿ ನಿಲ್ಲಿಸಲಾಗಿದೆ.

‘ಟ್ರ್ಯಾಕ್ಟರ್‌ ಜಪ್ತಿ ಬಗ್ಗೆ ಬ್ಯಾಂಕಿನವರು ಯಾವುದೇ ನೊಟೀಸ್‌ ನೀಡಿಲ್ಲ. ಏಕಾಏಕಿ ಏಜೆಂಟರ್‌ನ್ನು ಕಳುಹಿಸಿ ದೌರ್ಜನ್ಯದಿಂದ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಬ್ಯಾಂಕ್‌ನಿಂದ ಸಾಲ ವಸೂಲಾತಿ ಅಥವಾ ಟ್ರ್ಯಾಕ್ಟರ್‌ ವಶ ಪಡಿಸಿಕೊಳ್ಳಲು ನಿರ್ದೇಶನ ಬಂದ ಮೇಲೆಯೇ ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆಯುವ ಸಂದರ್ಭದಲ್ಲಿ ಫೋಟೊ ಸಹ ತೆಗೆದುಕೊಳ್ಳಲಾಗಿದೆ. ಯಾವುದೇ ದೌರ್ಜನ್ಯ ನಡೆಸಿಲ್ಲ. ರೈತರು ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಾಲದ ವಿಚಾರ ಮಾತನಾಡಿ, ಟ್ರ್ಯಾಕ್ಟರ್‌ಗಳನ್ನು ವಾಪಸು ಪಡೆಯುವುದಾಗಿ ಕೂಡ ಹೇಳಿದ್ದಾರೆ’ ಎಂದು ಎಸ್‌ಬಿಎಚ್‌ ಬ್ಯಾಂಕ್‌ ಪರವಾಗಿ ಟ್ರ್ಯಾಕ್ಟರ್‌ಗಳನ್ನು ವಶ ಪಡಿಸಿಕೊಂಡಿರುವ ದೇವೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.