ಲಿಂಗಸುಗೂರು: ವಿವಿಧ ವಸತಿ ಶಾಲೆಗಳ 6ನೇ ತರಗತಿಗೆ ಭಾನುವಾರ ಜರುಗಿದ ಪ್ರವೇಶ ಪರೀಕ್ಷೆಗೆ ಪಟ್ಟಣದ 10 ಪರೀಕ್ಷಾ ಕೇಂದ್ರದಲ್ಲಿ 3,086 ಮಕ್ಕಳ ಪೈಕಿ 2,873 ಮಕ್ಕಳು ಹಾಜರಾಗಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ತಿಳಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸಂಗಮೇಶ್ವರ ಕಾಲೇಜು, ಅಮರೇಶ್ವರ ಪ್ರೌಢಶಾಲೆ, ಬಸವೇಶ್ವರ ಪ್ರೌಢಶಾಲೆ, ಮಹಾಂತಮ್ಮ ಲಿಂಗನಗೌಡ ಪಾಟೀಲ ಕಾಲೇಜು(2), ವಿಸಿಬಿ ಕಾಲೇಜು(2), ಜೂನಿಯರ್ ಕಾಲೇಜು, ಪಿಬಿಎ ಸಿಬಿಎಸ್ಸಿ ಶಾಲೆ(2) ಪರೀಕ್ಷಾ ಕೇಂದ್ರಗಲ್ಲಿ ಒಟ್ಟು 3,086 ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದರು.
ವಸತಿ ಶಾಲೆಗಳಾದ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ, ಏಕಲವ್ಯ, ಆದರ್ಶ ವಿದ್ಯಾಲಯಗಳ 6ನೇ ತರಗತಿಗೆ ಪ್ರವೇಶ ಬಯಸುವವರು ಈ ಪರೀಕ್ಷೆಗೆ ಹಾಜರಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮಕ್ಕಳು ಲಿಂಗಸುಗೂರು ತಾಲ್ಲೂಕಿನಲ್ಲಿ ಪರೀಕ್ಷೆಗೆ ಹಾಜರಾಗಿರುವುದು ಉತ್ತಮ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಹರ್ಷ ಹಂಚಿಕೊಂಡರು.
ಪಟ್ಟಣದ ವಿವಿಧ ಶಾಲಾ ಕಾಲೇಜು ಗಳ ಪರೀಕ್ಷೆ ಕೇಂದ್ರಗಳಲ್ಲಿ ಕೇಂದ್ರದ ಮುಖ್ಯಸ್ಥರು, ಆಯಾ ಕೇಂದ್ರಗಳಲ್ಲಿ ಸಿಟಿಂಗ್ ಸ್ಕ್ವಾಡ್, ಅಧಿಕಾರಿಗಳ ನೇತೃತ್ವ ದಲ್ಲಿ ಅಧಿಕಾರಿಗಳ ತಂಡ, ಪರೀಕ್ಷಾ ಕೇಂದ್ರದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನಕಲು ಅಥವಾ ಅಕ್ರಮ ತಡೆಯಲು ಎಲ್ಲ ಹಂತದ ಸಿದ್ಧತೆ ಮಾಡಿದ್ದು ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಮಾನ್ವಿ ವರದಿ: ಪಟ್ಟಣದಲ್ಲಿ ಭಾನುವಾರ ಕರ್ನಾಟಕ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿನ ವಿವಿಧ ವಸತಿ ಶಾಲೆಗಳು ಮತ್ತು ಆದರ್ಶ ವಿದ್ಯಾಲ ಯಗಳ ಪ್ರವೇಶ ಪರೀಕ್ಷೆ ನಡೆದವು.
ಪಟ್ಟಣದ ಕಲ್ಮಠ ಶಾಲೆ, ಕಾಕತೀಯ ಶಾಲೆ, ಶಾರದಾ ವಿದ್ಯಾನಿಕೇತನ, ಬಿವಿಆರ್ ಶಾಲೆ, ಎಸ್ಎಸ್ವಿ ಶಾಲೆ, ಕನ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಒಟ್ಟು 1,961 ವಿದ್ಯಾರ್ಥಿಗಳ ಪೈಕಿ 1,817 ವಿದ್ಯಾರ್ಥಿಗಳು ಹಾಜರಾಗಿದ್ದರು.
144 ವಿದ್ಯಾರ್ಥಿಗಳು ಗೈರಾಗಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.