ADVERTISEMENT

ವಿದ್ಯಾರ್ಥಿಗಳಿಂದ ಹಣ ವಸೂಲಿ: ಆರೋಪ

ಮೇ ಆರಂಭದಿಂದಲೇ ಕಾಲೇಜು ತರಗತಿ; ಪಾಸ್‌ ಪರಿಗಣಿಸದ ಬಸ್‌ ನಿರ್ವಾಹಕರು

​ಪ್ರಜಾವಾಣಿ ವಾರ್ತೆ
Published 21 ಮೇ 2018, 11:24 IST
Last Updated 21 ಮೇ 2018, 11:24 IST
ದೇವದುರ್ಗದಿಂದ ಸುಂಕೇಶ್ವರಹಾಳಕ್ಕೆ ಕಾಲೇಜುಗೆಂದು ಹೊರಟ್ಟಿದ್ದ ವಿದ್ಯಾರ್ಥಿಯಿಂದ ನಿರ್ವಾಹಕರು ಟಿಕೆಟ್ ನೀಡಿರುವುದು
ದೇವದುರ್ಗದಿಂದ ಸುಂಕೇಶ್ವರಹಾಳಕ್ಕೆ ಕಾಲೇಜುಗೆಂದು ಹೊರಟ್ಟಿದ್ದ ವಿದ್ಯಾರ್ಥಿಯಿಂದ ನಿರ್ವಾಹಕರು ಟಿಕೆಟ್ ನೀಡಿರುವುದು   

ದೇವದುರ್ಗ: ಮೇ 1ರಿಂದಲೇ ಪಿಯು ದ್ವಿತೀಯ ವರ್ಷದ ತರಗತಿಗಳನ್ನು ಆರಂಭಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪ್ರಥಮ ವರ್ಷದ ಬಸ್‌ಪಾಸ್‌ಗಳನ್ನೆ ಪರಿಗಣಿಸಲು ಸರ್ಕಾರ ಆದೇಶ ಹೊರಡಿಸಿದೆ. ಆದರೂ ಕೆಲವೆಡೆ ಬಸ್‌ ನಿರ್ವಾಹಕರು ಒತ್ತಾಯಪೂರ್ವಕವಾಗಿ ಟಿಕೆಟ್‌ ಕೊಡುತ್ತಿದ್ದಾರೆ ಎಂದು ಹಲವು ಪಾಲಕರು ಆರೋಪಿಸಿದ್ದಾರೆ.

ಈ ಬಾರಿ ನಿಗದಿಗಿಂತ ಮುಂಚಿತವಾಗೇ ದ್ವಿತೀಯ ಪಿಯು ತರಗತಿ ಆರಂಭವಾಗಿವೆ. ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್‌ಪಾಸ್‌ ಹಾಗೂ ವಸತಿನಿಲಯಗಳನ್ನೂ ಮುಂಚಿತವಾಗಿ ಆರಂಭಿಸಲು ಸರ್ಕಾರ ಆದೇಶ ಹೊರಡಿಸಿದೆ. ಹೊಸದಾಗಿ ಬಸ್‌ ಪಾಸ್‌ ಕೊಡುವವರೆಗೂ ಪ್ರಥಮ ಪಿಯು ವೇಳೆ ಪಡೆದ ಪಾಸ್‌ಗಳನ್ನೇ ತೋರಿಸುವಂತೆ ತಿಳಿಸಲಾಗಿದೆ. ಆದರೆ, ಸ್ಥಳೀಯ ಡಿಪೊ ನಿರ್ವಾಹಕರು ಮಾತ್ರ ಇದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಒತ್ತಾಯಪೂರ್ವಕವಾಗಿ ಟಿಕೆಟ್‌ ನೀಡಿ ಹಣ ಪಡೆಯುತ್ತಿದ್ದಾರೆ ಎಂದು ಖುದ್ದು ವಿದ್ಯಾರ್ಥಿಗಳೇ ದೂರಿದ್ದಾರೆ. ಇದೇ ಕಾರಣಕ್ಕೆ ತಾವು ಕಾಲೇಜು ಬಿಟ್ಟು ಮನೆಯಲ್ಲಿ ಕುಳಿತಿದ್ದಾಗಿಯೂ ಅವರು ತಿಳಿಸಿದ್ದಾರೆ.

ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೇವದುರ್ಗದಿಂದ ರಾಯಚೂರು, ಶಹಾಪುರ, ಯಾದಗೀರ, ಸುರಪುರ ಪಟ್ಟಣಕ್ಕೆ ಹೋಗುತ್ತಾರೆ. ಅದೇ ರೀತಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಸಾವಿರಾರು ವಿದ್ಯಾರ್ಥಿಗಳು ನರುತ್ತಾರೆ. ಇವರೆಲ್ಲರೂ ಸರ್ಕಾರಿ ಬಸ್ಸುಗಳನ್ನೇ ಅವಲಂಬಿಸಿದ್ದಾರೆ.

ADVERTISEMENT

ಆದರೆ, ನಿರ್ವಾಹಕರ ಕ್ರಮದಿಂದಾಗಿ ಪ್ರತಿದಿನವೂ ಹಣ ನೀಡಬೇಕಾಗಿದೆ. ಈ ಆದೇಶ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆಯೂ ಸಾರಿಗೆ ಅಧಿಕಾರಿಗಳಿಗೆ ನೀಡಿದ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.ಬಸ್‌ ವ್ಯವಸ್ಥೆಯ ಬಗೆಗಿನ ನೋಟಿಸ್‌ ಎಲ್ಲರಿಗೂ ಕಾಣುವಂತೆ ನಿಲ್ದಾಣಗಳಲ್ಲಿ ಅಂಟಿಸುವಂತೆ ತಿಳಿಸಲಾಗಿದೆ. ಆದರೂ ವಿದ್ಯಾರ್ಥಿಗಳಿಗೆ ಅನ್ಯಾಯ ತಪ್ಪಿಲ್ಲ ಎಂಬುದು ಪಾಲಕ ಮಲ್ಲನಗೌಡ ಅವರ ಆರೋಪ.

‘ನಿರ್ವಾಹಕರು ನಮ್ಮ ಮಕ್ಕಳಿಗೆ ತೊಂದರೆ ನೀಡುತ್ತಿರುವ ಬಗ್ಗೆ ಡಿಪೊ ವ್ಯವಸ್ಥಾಪಕರಿಗೆ ಖುದ್ದಾಗಿ ಭೇಟಿಯಾಗಿ ಮಾಹಿತಿ ನೀಡಿದ್ದೇವೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೂ ನಮ್ಮ ಮನವಿಗೆ ಬೆಲೆ ಕೊಟ್ಟಿಲ್ಲ. ಇದಕ್ಕೆಲ್ಲ ಡಿಪೊ ವ್ಯವಸ್ಥಾಪಕರೇ ನೇರ ಹೊಣೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

**
ಮೇ ತಿಂಗಳಲ್ಲಿ ಹಳೆ ಪಾಸ್‌ ನಡೆಸುವಂತೆ ಸರ್ಕಾರದಿಂದ ಆದೇಶ ಬಂದಿದೆ. ನಾನು ಎಲ್ಲ ನಿರ್ವಾಹಕರಿಗೆ ತಿಳಿಸಿದ್ದೇನೆ. ಟಿಕೆಟ್‌ ಕೊಡುತ್ತಿರುವುದು ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳುತ್ತೇನೆ
ಹಸನ್‌ ಅಲಿ,ಡಿ‍ಪೊ ವ್ಯವಸ್ಥಾ‍ಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.