ADVERTISEMENT

ಸಿಬ್ಬಂದಿ ಕೊರತೆ: ಮಂದಗತಿಯಲ್ಲಿ ಕೆಲಸ

ರಾಯಚೂರು ತಾ.ಪಂ ಸಮಸ್ಯೆ ಸ್ಪಂದನೆ ಇಲ್ಲ

ಶಶಿಧರ ಗರ್ಗಶ್ವೇರಿ
Published 3 ಫೆಬ್ರುವರಿ 2017, 6:08 IST
Last Updated 3 ಫೆಬ್ರುವರಿ 2017, 6:08 IST
ಸಿಬ್ಬಂದಿ ಕೊರತೆ: ಮಂದಗತಿಯಲ್ಲಿ ಕೆಲಸ
ಸಿಬ್ಬಂದಿ ಕೊರತೆ: ಮಂದಗತಿಯಲ್ಲಿ ಕೆಲಸ   

ರಾಯಚೂರು: ರಾಯಚೂರು ತಾಲ್ಲೂಕು ಪಂಚಾಯಿತಿ ಮತ್ತು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆ ಕಾರಣ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿವೆ. ಇದರಿಂದ ಜನರು ಸಣ್ಣಪುಟ್ಟ ಕೆಲಸಗಳಿಗೂ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ.

ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆ ಸೇರಿದಂತೆ ಒಟ್ಟು 21 ಹುದ್ದೆಗಳಿದ್ದು, 10 ಹುದ್ದೆಗಳು ಖಾಲಿ ಇವೆ. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರನ್ನು ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಉಳಿದಂತೆ ಕಚೇರಿ ವ್ಯವಸ್ಥಾಪಕರು, ಬೆರಳಚ್ಚುಗಾರ 2 ಹುದ್ದೆಗಳು, ಪ್ರಥಮ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ, ಪ್ರಥಮ ದರ್ಜೆ ಸಹಾಯಕ, ಪ್ರಗತಿ ಸಹಾಯಕ, ಶೀಘ್ರಲಿಪಿಕಾರ, ವಾಹನ ಚಾಲಕರ ಒಂದೊಂದು ಹುದ್ದೆಗಳು ಖಾಲಿಯಿವೆ. 

ತಾಲ್ಲೂಕಿನಲ್ಲಿ 34 ಗ್ರಾಮ ಪಂಚಾಯಿತಿಗಳಿದ್ದು, 19 ಗ್ರಾಮ ಪಂಚಾಯಿತಿ ಅಧಿಕಾರಿಗಳು (ಪಿಡಿಒ) ಇದ್ದಾರೆ.  15 ಪಿಡಿಒಗಳಿಗೆ ಎರಡು ಗ್ರಾಮ ಪಂಚಾಯಿತಿಗಳ ಹೊಣೆ ಇದೆ. 34 ಕಾರ್ಯದರ್ಶಿಗಳ ಹುದ್ದೆಗಳಲ್ಲಿ 12 ಮಂದಿ ಮಾತ್ರ ಇದ್ದಾರೆ. 11 ಕಾರ್ಯದರ್ಶಿಗಳು ಎರಡು ಗ್ರಾಮ ಪಂಚಾಯಿತಿಗಳನ್ನು ನಿಭಾಯಿಸಬೇಕಿದೆ.

ಹಾಗೆಯೇ 34 ಗ್ರಾಮ ಪಂಚಾಯಿತಿಗಳಲ್ಲಿ  ಮೂರು ಕಡೆ ಮಾತ್ರ ಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಉಳಿದೆಡೆ ಸಿಬ್ಬಂದಿ ಇದ್ದಾರೆ. ‘ಪಿಡಿಒ ಮತ್ತು ಕಾರ್ಯದರ್ಶಿ ಹುದ್ದೆಗಳಲ್ಲಿ ಕೊರತೆ ಇದೆ. ಈಗ ಪಿಡಿಒ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆದಿದ್ದು, ಶೀಘ್ರ ನೇಮಕಾತಿ ಆಗಲಿದೆ. ಕಾರ್ಯದರ್ಶಿ ಹುದ್ದೆಗಳು ಭರ್ತಿಯಾಗಬೇಕಿದೆ’ ಎಂದು ತಾಲ್ಲೂಕು ಪಂಚಾಯಿತಿಯ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಹೇಳಿದರು.

‘ನರೇಗಾಕ್ಕೆ ತೊಂದರೆ ಆಗಿಲ್ಲ’
‘ ತಾಂತ್ರಿಕ ಸಹಾಯಕರು 10 ಹುದ್ದೆಗಳಿಗೆ ಎಂಟು ಹುದ್ದೆಗಳು ಭರ್ತಿ ಇರುವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಕೆಲಸಗಳಿಗೆ ಹೆಚ್ಚಿನ ಸಮಸ್ಯೆ ಆಗಿಲ್ಲ’ ಎಂದು ತಾಲ್ಲೂಕು ಪಂಚಾಯಿತಿಯ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ತಿಳಿಸಿದರು.

ಆಧಾರ್‌ ಸಂಖ್ಯೆ ಜೋಡಣೆ
ನರೇಗಾ ಫಲಾನುಭವಿಯೂ ಬ್ಯಾಂಕ್‌ ಖಾತೆ ತೆರೆದು, ಅದಕ್ಕೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡು ವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಜ. 31ರಿಂದ ಫೆ. 15ರವರೆಗೆ ಈ ಆಧಾರ್‌ ಸಂಖ್ಯೆ ಜೋಡಣೆ ಕಾರ್ಯಕ್ರಮ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಬ್ಯಾಂಕ್‌ಗಳಿಗೆ ಹೋಗಿ ಈ ಕುರಿತ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಬ್ಯಾಂಕ್‌ ಖಾತೆ ತೆರೆಯಲು,ಆಧಾರ್‌ ಸಂಖ್ಯೆ ಜೋಡಣೆಗೆ ಫಲಾನುಭವಿಗಳಿಗೆ ನೆರವು ನೀಡುತ್ತಿದ್ದಾರೆ.

ಸೇವಾ ಕೇಂದ್ರಕ್ಕೆ ಸಿಬ್ಬಂದಿ ಇಲ್ಲ
ಪಹಣಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳಿಗೆ ಹೋಬಳಿ ಅಥವಾ ತಾಲ್ಲೂಕು ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಬಾಪೂಜಿ ಸೇವಾ ಕೇಂದ್ರ ತೆರೆಯಲಾಗಿದೆ.  ಆದರೆ, ರಾಯಚೂರು ತಾಲ್ಲೂಕಿ 34 ಗ್ರಾಮ ಪಂಚಾಯಿತಿಯಲ್ಲಿ ಈ ಸೇವಾ ಕೇಂದ್ರ ವನ್ನು ನಿರ್ವಹಿಸಲು ಸಿಬ್ಬಂದಿಯಿಲ್ಲ. ಇದನ್ನೂ ಸಹ ಗ್ರಾಮ ಪಂಚಾಯಿತಿಯ ಡಾಟಾ ಆಪರೇಟರ್‌ಗಳೇ ಮಾಡುತ್ತಿದ್ದಾರೆ.

ADVERTISEMENT

***

ಸಿಬ್ಬಂದಿ ಕೊರತೆಯ ಕಾರಣ ಪಿಡಿಒಗಳಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಇದರಿಂದ ಸಾರ್ವಜನರಿಕರ ಕೆಲಸಗಳು ವಿಳಂಬವಾಗುತ್ತಿವೆ.
–ರಮೇಶ, ತಾ.ಪಂ. ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.