ಸಿಂಧನೂರು: ನಗರದ ವಾರ್ಡ್ ಸಂಖ್ಯೆ 16 ರ ಆದರ್ಶ ಕಾಲೊನಿಯ ಅಪೂರ್ವ ಆಸ್ಪತ್ರೆ ಮುಂಭಾಗದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ವಾರ್ಡ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯಲ್ಲಿ ಗುಂಡಿ ಅಗೆದು ಒಳಚರಂಡಿಯ ಮ್ಯಾನ್ಹೋಲ್ ಹಾಗೂ ಚರಂಡಿ ನಿರ್ಮಿಸಿದ್ದಾರೆ. ಆದರೆ, ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚಿ ಸಮತಟ್ಟು ಮಾಡಿಲ್ಲ. ಹೀಗಾಗಿ ಬಸ್ ನಿಲ್ದಾಣದ ಬಳಿಯಿರುವ ಅಂಬಾದೇವಿ ದೇವಸ್ಥಾನದಿಂದ ಶಾರದಾ ಮಹಿಳಾ ಕಾಲೇಜಿನವರೆಗೆ ರಸ್ತೆ ತೆಗ್ಗು-ದಿನ್ನೆಯಾಗಿ ಮಾರ್ಪಟ್ಟಿದೆ. ಮಳೆ ಬಂದರೆ ಸಾಕು ಈ ರಸ್ತೆಯಲ್ಲಿ ಶಾಲಾ ವಾಹನಗಳು, ಬೈಕ್ ಸವಾರರು ತಿರುಗಾಡಲು ಅಸಾಧ್ಯವಾಗಿದೆ.
‘ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೆಸರಿನಲ್ಲಿಯೇ ನಡೆದುಕೊಂಡು ಹೋಗುವ ದುಃಸ್ಥಿತಿಯಿದ್ದು, ಎರಡು ದಿನಗಳ ಹಿಂದೆ ನಿಂಗಮ್ಮ ಎನ್ನುವ ಮಹಿಳೆ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ರಸ್ತೆ ಸುಧಾರಣೆ ಮಾಡುವಂತೆ ಹಲವಾರು ಬಾರಿ ನಗರಸಭೆ ಅಧ್ಯಕ್ಷರಿಗೆ ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ವಾರ್ಡ್ ನಿವಾಸಿಗಳಾದ ಶಂಕರರಾವ್, ಚನ್ನಾರೆಡ್ಡಿ, ವಿರೂಪಾಕ್ಷಿ ಆರೋಪಿಸಿದ್ದಾರೆ.
‘ಸಾರ್ವಜನಿಕರ ಸಂಚಾರಕ್ಕೆ ಆಗಿರುವ ತೊಂದರೆಯನ್ನು ಅರಿತು ನಗರಸಭೆ ಆಡಳಿತ ಮಂಡಳಿಯು ಇನ್ನಾದರೂ ನಿದ್ದೆಗಣ್ಣಿನಿಂದ ಎಚ್ಚೆತ್ತುಕೊಳ್ಳಬೇಕು. ಈ ತಕ್ಷಣವೇ ರಸ್ತೆಗೆ ಮುರುಮ್ ಹಾಕಿ ದುರಸ್ತಿಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಾರ್ಡ್ ನಿವಾಸಿಗಳೊಂದಿಗೆ ರಸ್ತೆಯಲ್ಲಿ ಸಸಿ ನೆಟ್ಟು ಪ್ರತಿಭಟನೆ ಮಾಡಲಾಗುವುದು’ ಎಂದು ಕನ್ನಡಿಗರ ಜನಪರ ವೇದಿಕೆ ಜಿಲ್ಲಾ ಘಟಕದ ಉಪಾಧ್ಯಕ್ಷ ಧರ್ಮರಾಜ್ ಉಪ್ಪಾರ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.