ADVERTISEMENT

ಸಮಗ್ರ ಕೃಷಿಯಿಂದ ಆದಾಯ ದ್ವಿಗುಣ: ಡಾ. ಬಿ.ವಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2018, 13:18 IST
Last Updated 11 ಅಕ್ಟೋಬರ್ 2018, 13:18 IST
ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಯುವಕರಿಗಾಗಿ ಆಯೋಜಿಸಿದ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಈಚೆಗೆ ‘ಕೃಷಿಯಲ್ಲಿ ಜೈವಿಕ ಪರಿಕರಗಳ ಉತ್ಪಾದನೆ ಮತ್ತು ಬಳಕೆ’ಯ ಪ್ರಾಯೋಗಿಕ ಕೈಪಿಡಿಯನ್ನು ಗಣ್ಯರು ಬಿಡುಗಡೆಗೊಳಿಸಿದರು
ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಯುವಕರಿಗಾಗಿ ಆಯೋಜಿಸಿದ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಈಚೆಗೆ ‘ಕೃಷಿಯಲ್ಲಿ ಜೈವಿಕ ಪರಿಕರಗಳ ಉತ್ಪಾದನೆ ಮತ್ತು ಬಳಕೆ’ಯ ಪ್ರಾಯೋಗಿಕ ಕೈಪಿಡಿಯನ್ನು ಗಣ್ಯರು ಬಿಡುಗಡೆಗೊಳಿಸಿದರು   

ರಾಯಚೂರು: ಸಮಗ್ರ ಕೃಷಿ ಅಳವಡಿಕೊಂಡರೆ ರೈತರ ಆದಾಯ ದ್ವಿಗುಣ ಮಾಡಿಕೊಳ್ಳಬಹುದು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ವಿ. ಪಾಟೀಲ ಹೇಳಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಜೈವಿಕ ಪರಿಕರಗಳ ಉದ್ಯಮಶೀಲತೆ ಕೇಂದ್ರದಿಂದ ‘ಕೃಷಿಯಲ್ಲಿ ಜೈವಿಕ ಪರಿಕರಗಳ ಉತ್ಪಾದನೆ ಮತ್ತು ಬಳಕೆ’ ಕುರಿತು ಗ್ರಾಮೀಣ ಯುವಕರಿಗಾಗಿ ಆಯೋಜಿಸಿದ್ದ ಒಂದು ವಾರದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜನಸಂಖ್ಯೆ ಹೆಚ್ಚಾದಂತೆ ಆಹಾರ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಕೃಷಿಯಲ್ಲಿ ನಿರಂತರ ಸಂಶೋಧನೆಗಳು ನಡೆಯುತ್ತವೆ. ಅದೇ ರೀತಿ ರೈತರು ಕೂಡಾ ಸಂಶೋಧನೆಗಳನ್ನು ಅಳವಡಿಸಿಕೊಂಡು, ಕೃಷಿ ಉತ್ಪನ್ನ ಹೆಚ್ಚಿಸಬೇಕು ಎಂದು ತಿಳಿಸಿದರು.

ADVERTISEMENT

ಪ್ರಭಾರಿ ಕುಲಪತಿ ಡಾ. ಎಸ್. ಕೆ. ಮೇಟಿ ಮಾತನಾಡಿ, ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಿ, ಯುವಕರು ಕೃಷಿಯಲ್ಲಿ ಸಕ್ರಿಯವಾಗಿ ತೋಡಗಿಸಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಸ್ತುತ ಬಳಕೆ ಮಾಡುತ್ತಿರುವ ರಾಸಾಯನಿಕ ಪೀಡೆನಾಶಕಗಳ ಜೊತೆ ಜೈವಿಕ ಪರಿಕರಗಳ ಹೊಂದಾಣಿಕೆ ಬಗ್ಗೆ ಹೆಚ್ಚು ಸಂಶೋದನೆ ಕೈಗೊಂಡು ಕೃಷಿ ವಿಶ್ವವಿದ್ಯಾಲಯದ ತಂತ್ರಜ್ಞಾನಗಳು ರೈತರಿಗೆ ಮುಟ್ಟುವಂತಾಗಬೇಕು ಎಂದು ತಿಳಿಸಿದರು.

ವಿಸ್ತಾರಣಾ ನಿರ್ದೇಶಕ ಡಾ. ಬಿ. ಎಂ. ಚಿತ್ತಾಪುರ ಮಾತನಾಡಿ, ಜೈವಿಕ ಪರಿಕರಗಳನ್ನು ಬಳಸಿ ಸಮಗ್ರವಾಗಿ ಪೀಡೆ ನಿರ್ವಹಣೆ ಮಾಡುವುದರ ಮೂಲಕ ಹೆಚ್ಚು ಇಳುವರಿ ಪಡೆಯಬಹುದು ಎಂದು ಯುವಕರಿಗೆ ಕರೆ ನೀಡಿದರು.

ಸಂಶೋಧನಾ ನಿರ್ದೇಶಕ ಡಾ. ಬಿ.ಕೆ. ದೇಸಾಯಿ ಮಾತನಾಡಿ, ಜೈವಿಕ ಪರಿಕರಗಳ ಉದ್ಯಮಶೀಲತೆ ಮತ್ತು ಸರ್ಕಾರದಿಂದ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.

ಕೃಷಿ ಮಹಾವಿದ್ಯಾಲಯ ಡೀನ್‌ ಡಾ. ಎಂ. ಜಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಕಾರ್ಯಕ್ರಮದ ನಿರ್ದೇಶಕ ಹಾಗೂ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗುರುರಾಜ ಸುಂಕದ ಪ್ರಾಸ್ತಾವಿಕವಾಗಿ ಮಾತನಾಡಿ, ಹಸಿರು ಕ್ರಾಂತಿಯ ಪರಿಣಾಮವಾಗಿ ಯಥೇಚ್ಚವಾಗಿ ರಾಸಾಯನಿಕ ಪೀಡೆನಾಶಕಗಳು ಮತ್ತು ರಸಗೊಬ್ಬರಗಳನ್ನು ಬಳಸಿ ಪರಿಸರದ ಮೇಲೆ ಜೀವ ಸಂಕುಲದ ಮೇಲೆ ಅಗುತ್ತಿರುವ ದುಷ್ಪಾರಿಣಾಮಗಳ ಬಗ್ಗೆ ವಿವರಿಸಿದರು.

ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಿಂದ ಒಟ್ಟು 40 ಗ್ರಾಮೀಣ ಯುವಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಡಾ, ಮಹದೇವಸ್ವಾಮಿ ಸ್ವಾಗತಿಸಿದರು. ಡಾ. ಅಮರೇಶ ವೈ. ಎಸ್. ನಿರೂಪಿಸಿದರು. ಡಾ. ಅಶ್ವಥ ನಾರಾಯಣ ವಂದಿಸಿದರು. ಡಾ. ಅರುಣಕುಮಾರ್ ಹೊಸಮನಿ, ಸುಶೀಲಾ ನಾಡಗೌಡ ಮತ್ತು ಅನೇಕ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.