ರಾಮನಗರ: ಅಕ್ರಮ ಜಾಹೀರಾತುಗಳ ಹಾವಳಿ ನಿಯಂತ್ರಣಕ್ಕೆ ಕಡೆಗೂ ನಗರಸಭೆ ಕ್ರಮ ಕೈಗೊಂಡಿದೆ. ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ಗಳ ತೆರವು ಕಾರ್ಯಾಚರಣೆಯು ಭರದಿಂದ ಸಾಗಿದೆ. ಮಂಗಳವಾರವೇ ಈ ಕಾರ್ಯಾಚರಣೆಗೆ ಚಾಲನೆ ದೊರೆತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಇರುವ ಫಲಕಗಳನ್ನು ನಗರಸಭೆಯ ಸಿಬ್ಬಂದಿ ಕಿತ್ತೊಗೆದರು.
ರಾಜಕಾರಣಿಗಳ ಕಟೌಟ್ಗಳು, ಶುಭಾಶಯ ಕೋರುವ ದೊಡ್ಡ ಫಲಕಗಳು, ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳು ಸೇರಿದಂತೆ ಬಗೆಬಗೆಯ ಸಂದೇಶವುಳ್ಳ ಫಲಕಗಳು ಬೀದಿಗೆ ಬಿದ್ದವು. ಕೆಲವು ಫಲಕಗಳನ್ನು ಸಿಬ್ಬಂದಿ ಹೊತ್ತುತಂದು ಒಂದೆಡೆ ಹಾಕಿದರು. ಬುಧವಾರವೂ ಕಾರ್ಯಾಚರಣೆಯು ಮುಂದುವರಿದಿತ್ತು.
‘ಅನಧಿಕೃತ ಜಾಹೀರಾತುಗಳ ತೆರವು ಕಾರ್ಯಾಚರಣೆಗೆಂದೇ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಶೇ 80ರಷ್ಟು ಅಕ್ರಮ ಫಲಕಗಳನ್ನು ತೆರವು ಮಾಡಲಾಗಿದೆ. ಉಳಿದವುಗಳನ್ನೂ ತೆಗೆದುಹಾಕಲಾಗುವುದು’ ಎಂದು ನಗರಸಭೆಯ ಆಯುಕ್ತ ಕೆ. ಮಾಯಣ್ಣ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗಳ ವ್ಯಾಪ್ತಿಯಲ್ಲಿ ಅಕ್ರಮ ಜಾಹೀರಾತು ಫಲಕಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಾಯಿದತ್ತಾ ಎಂಬುವರು ಉಪ ಲೋಕಾಯುಕ್ತರಿಗೆ ಈಚೆಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಉಪಲೋಕಾಯುಕ್ತರು ಎರಡೂ ನಗರಸಭೆಗಳಿಗೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಾಹೀರಾತುಗಳ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆದಿರುವ ಕುರಿತು ‘ಪ್ರಜಾವಾಣಿ’ ಮೊದಲು ವರದಿ ಪ್ರಕಟಿಸಿ ಗಮನ ಸೆಳೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.