ADVERTISEMENT

ಅಕ್ರಮ ರೆಸಾರ್ಟ್‌ ತೆರವಿಗೆ ಹೋರಾಟ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 10:06 IST
Last Updated 16 ಸೆಪ್ಟೆಂಬರ್ 2017, 10:06 IST
ಮಂಚನಬೆಲೆ ಜಲಾಶಯದಲ್ಲಿ ಶುಕ್ರವಾರ ಗಂಗಾಪೂಜೆ ನೆರವೇರಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಬಾಗಿನ ಅರ್ಪಿಸಿದರು
ಮಂಚನಬೆಲೆ ಜಲಾಶಯದಲ್ಲಿ ಶುಕ್ರವಾರ ಗಂಗಾಪೂಜೆ ನೆರವೇರಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಬಾಗಿನ ಅರ್ಪಿಸಿದರು   

ಮಾಡಬಾಳ್‌(ಮಾಗಡಿ): ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ ತಡದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ರೆಸಾರ್ಟ್‌ ಹಾಗೂ ಕೈಗಾರಿಕೆಗಳನ್ನು ತೆರವುಗೊಳಿಸುವಂತೆ ಹೋರಾಟ ನಡೆಸಿ, ಜಲಾಶಯದ ನೀರು ಕಲುಷಿತವಾಗದಂತೆ ಉಳಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ತಿಳಿಸಿದರು.

ಶುಕ್ರವಾರ ಮಂಚನಬೆಲೆ ಜಲಾಶಯಕ್ಕೆ ಭೇಟಿ ನೀಡಿ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಎ.ಮಂಜುನಾಥ ಅವರನ್ನು ಮಂಗಳವಾದ್ಯ ಸಹಿತ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಜಲಾಶಯಕ್ಕೆ ಕರೆದೊಯ್ಯಲಾಯಿತು, ಪೂಜಾ ಕುಣಿತದ ಜಯರಾಮಯ್ಯ ತಂಡದವರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.

ಕಳಪೆ ಕಾಮಗಾರಿ: ‘ಪಟ್ಟಣದ ಗೌರಮ್ಮನ ಕೆರೆ ಅಭಿವೃದ್ಧಿ ಪಡಿಸುವ ಬಗ್ಗೆ ಶಾಸಕರು ಸುಳ್ಳು ಹೇಳುತ್ತಿದ್ದಾರೆ, ಈ ಕೆರೆ ಅಭಿವೃದ್ಧಿಯ ಡಿಪಿಆರ್ ಯಾರು ಮಾಡಿಸಿದ್ದು ಎಂಬ ವಿಷಯದ ಬಗ್ಗೆ ಶಾಸಕರು ನೇರವಾಗಿ ಚರ್ಚೆಗೆ ಬರಲಿ’ ಎಂದು ಮಂಜುನಾಥ ತಿಳಿಸಿದರು.

ADVERTISEMENT

ಕೆರೆ ಅಭಿವೃದ್ಧಿಗೆ ಮಂಜೂರಾಗಿದ್ದ ಕೋಟ್ಯಂತರ ಅನುದಾನ ಬಳಸಿ ಕಳಪೆ ಕಾಮಗಾರಿ ನಡೆಸಿ ಹಣ ದುರುಪಯೋಗ ಪಡಿಸಿಕೊಂಡಿದ್ದರು. ಕೆರೆಯ ತಡೆಗೋಡೆ ಬಿರುಕು ಬಿಟ್ಟು, ನೀರು ಪೋಲಾಗುತ್ತಿದೆ ಎಂದರು.

‘ಮಾಗಡಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಸಮರ್ಪಕವಾದ ಕಾಮಗಾರಿ ನಡೆಸುತ್ತಿಲ್ಲ ಎಂದು ಶಾಸಕರು ಹೇಳಿಕೆ ಕೊಟ್ಟಿದ್ದಾರೆ. ಪ್ರಾಧಿಕಾರದ ಅನುದಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತೋರಿಸಿಕೊಟ್ಟಿದ್ದು ನಾನು, ಪ್ರಾಧಿಕಾರಕ್ಕೆ ಚಿಗಳೂರು ಗಂಗಾಧರ್ ಅಧ್ಯಕ್ಷರಾದ ನಂತರ ನಾನು ಮತ್ತು ಸಂಸದ ಡಿ.ಕೆ.ಸುರೇಶ್ ಜೊತೆಗೂಡಿ ₹13 ಕೋಟಿ ಅನುದಾನದಲ್ಲಿ ತಾಲ್ಲೂಕಿನ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿತ್ತು’ ಎಂದರು.

‘ನಾಲ್ಕು ಬಾರಿ ಶಾಸಕರಾಗಿರುವ ಎಚ್.ಸಿ.ಬಾಲಕೃಷ್ಣ ಒಬ್ಬನೇ ಒಬ್ಬ ಅರ್ಹ ಫಲಾನುಭವಿಗೆ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ವಿತರಿಸಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ನಿವೇಶನ ನೀಡುತ್ತೇವೆ ಎಂದು ಫಲಾನುಭವಿಗಳ ಪಟ್ಟಿ ತಯಾರಿಸುವಂತೆ ಗಿಮಿಕ್ ಮಾಡುವ ಶಾಸಕರಿಗೆ 2018 ರ ವಿಧಾನ ಸಭಾ ಚುನಾವಣೆಯಲ್ಲಿ ಮತದಾರರೇ ಸರಿಯಾದ ಬುದ್ಧಿ ಕಲಿಸುತ್ತಾರೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಂಕರ್, ಹನುಮೆ ಗೌಡ, ಮುಖಂಡರಾದ ಶಿವು, ನವೀನ್, ವೀರಶೈವ ಮುಖಂಡರಾದ ಅನಿಲ್ಕುಮಾರ್‌, ರಮೇಶ್, ಗೌಡ, ನಾಗರಾಜ್, ವೆಂಕಟೇಶ್, ಅಯ್ಯಂಡಳ್ಳಿ ರಂಗಸ್ವಾಮಿ, ಪ್ರಮೋದ್, ಅಂಬರೀಷ್, ನವೀನ್, ನರಸೇಗೌಡ, ದಬ್ಬಗುಳಿ ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.