ADVERTISEMENT

ಕಾರ್‌ ಡಿಕ್ಕಿ: ಇಬ್ಬರು ಪೌರ ಕಾರ್ಮಿಕರ ಸಾವು

ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರಕ್ಕೆ ಕಾರ್ಮಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 9:34 IST
Last Updated 24 ಜುಲೈ 2017, 9:34 IST

ರಾಮನಗರ: ಇಲ್ಲಿನ ಜಿಲ್ಲಾ ಪಂಚಾಯಿತಿ ಭವನದ ಎದುರು ಶನಿವಾರ ರಾತ್ರಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾರ್‌ ಡಿಕ್ಕಿ ಹೊಡೆದು ಇಬ್ಬರು ಪೌರಕಾರ್ಮಿಕರು ಮೃತಪಟ್ಟರು.

ರಾಮನಗರ ನಗರಸಭೆಯ ಗುತ್ತಿಗೆ ಪೌರ ಕಾರ್ಮಿಕರಾದ ಸೋಮಶೇಖರ್ (34) ಹಾಗೂ ಚಿನ್ನು (28) ಮೃತರು. ಈ ಇಬ್ಬರು ನಗರದ ವಿವಿಧ ಬಡಾವಣೆಗಳಲ್ಲಿ ಡೆಂಗಿ ನಿಯಂತ್ರಣಕ್ಕಾಗಿ ಫಾಗಿಂಗ್‌ ಮಾಡಿ ವಾಪಸ್‌ ನಡೆದುಕೊಂಡು ಹೊರಟಿದ್ದರು. ಆಗ ಮೈಸೂರು ಕಡೆಯಿಂದ ಬಂದ ಕಾರ್ ಡಿಕ್ಕಿ ಹೊಡೆಯಿತು. ಸೋಮಶೇಖರ್ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟರೆ, ಚಿನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು.

ಈ ಕುರಿತು ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಕಾರ್ ಬಿಟ್ಟು ಪರಾರಿಯಾಗಿದ್ದಾನೆ.

ADVERTISEMENT

₹10 ಲಕ್ಷ ಪರಿಹಾರಕ್ಕೆ ಆಗ್ರಹ: ನಗರದಲ್ಲಿ ಸೇವೆ ಸಲ್ಲಿಸುತ್ತಿರುವ 96 ಕಾಯಂ ಪೌರಕಾರ್ಮಿಕರು, 52 ಗುತ್ತಿಗೆ ಪೌರ ಕಾರ್ಮಿಕರು ಭಾನುವಾರ ಬೆಳಗ್ಗೆ ಸ್ವಚ್ಛತಾ ಕಾರ್ಯ ಬಹಿಷ್ಕರಿಸಿ, ಜಿಲ್ಲಾ ಆಸ್ಪತ್ರೆಯ ಶವಾಗಾರದ ಎದುರು ಸೇರಿದ್ದರು.

ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ ನೀಡಬೇಕು. ಅವರ ಪತ್ನಿಯರಿಗೆ ನಗರಸಭೆಯಲ್ಲಿಯೇ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಬೆಳಿಗ್ಗೆ 5 ಗಂಟೆಗೆ ಪೌರ ಕಾರ್ಮಿಕರು ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹೆದ್ದಾರಿಗಳನ್ನು ಸ್ವಚ್ಛಗೊಳಿಸುವ ವೇಳೆ ಅಪಘಾತ ಸಂಭವಿಸಿದ ಉದಾಹರಣೆಗಳಿವೆ. ಕಾರ್ಮಿಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಬಿ.ಆರ್‌. ಮಮತಾ. ನಗರಸಭೆ ಆಯುಕ್ತ ಕೆ. ಮಾಯಣ್ಣಗೌಡ ಇತರರು ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.