ADVERTISEMENT

ಕೊಚ್ಚೆಗುಂಡಿಯಾದ ಚಾರಿತ್ರಿಕ ಕೆರೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 10:20 IST
Last Updated 12 ಜುಲೈ 2017, 10:20 IST
ಮಾಗಡಿ ಪಟ್ಟಣದ ಕೋಟೆಯ ಕಂದಕಕ್ಕೆ ನೀರು ತುಂಬಿಸಲು ಕಟ್ಟಿಸಿದ್ದ ಹೊಂಬಾಳಮ್ಮನಪೇಟೆ ಚಾರಿತ್ರಿಕ ಕೆರೆ ದುರಸ್ತಿ ಇಲ್ಲದೆ ಕೊಚ್ಚೆ ಗುಂಡಿಯಾಗಿದೆ
ಮಾಗಡಿ ಪಟ್ಟಣದ ಕೋಟೆಯ ಕಂದಕಕ್ಕೆ ನೀರು ತುಂಬಿಸಲು ಕಟ್ಟಿಸಿದ್ದ ಹೊಂಬಾಳಮ್ಮನಪೇಟೆ ಚಾರಿತ್ರಿಕ ಕೆರೆ ದುರಸ್ತಿ ಇಲ್ಲದೆ ಕೊಚ್ಚೆ ಗುಂಡಿಯಾಗಿದೆ   

ಮಾಗಡಿ: ಕೊಚ್ಚೆಗುಂಡಿಯಂತಿರುವ ಸಕಲ ರೋಗಗಳ ಉಗಮ ಸ್ಥಾನವಾಗಿರುವ ಚಾರಿತ್ರಿಕ ಹೊಂಬಾಳಮ್ಮನಪೇಟೆ ಕೆರೆ ದುರಸ್ತಿ ಪಡಿಸುವಂತೆ ಚಲುವರಾಯ ಸ್ವಾಮಿ ಕಲೆ ಮತ್ತು ಸಾಂಸ್ಕೃತಿಕ ಬಳಗದ ಅಧ್ಯಕ್ಷ ರಾಮಚಂದ್ರಯ್ಯ ತಿಳಿಸಿದ್ದಾರೆ.

ಬಳಗದ ಕಚೇರಿಯಲ್ಲಿ  ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾಗಡಿಯಲ್ಲಿ ಮಣ್ಣಿನ ಕೋಟೆ ಕಟ್ಟಿಸಿದ್ದ ಗುಡೇಮಾರನ ಹಳ್ಳಿ ಪಾಳೇಗಾರ ತಳಾರಿ ಗಂಗಪ್ಪ ನಾಯಕನ ತಂದೆ ದಂಡಪ್ಪ ನಾಯಕ, ಕೋಟೆಯ ಸುತ್ತಲಿನ ಕಂದಕಕ್ಕೆ ನೀರು ತುಂಬಿಸಿ ಕೋಟೆ ರಕ್ಷಿಸಲು ಹೊಂಬಾಳಮ್ಮನಪೇಟೆ ಕೆರೆ ಕಟ್ಟಿಸಿದ ಐತಿಹ್ಯವಿದೆ.

ಕೋಟೆಯ ಕಂದಕದ ಜೊತೆಗೆ ನೂರಾರು ಎಕರೆ ತೋಟಗಳಿಗೆ ನೀರುಣಿಸಿ ಬೆಳೆ ಬೆಳೆಯಲು ಅನುಕೂಲವಾಗಿದೆ. ಗ್ರಾಮಕ್ಕೆ ಸಿಹಿನೀರು ಒದಗಿಸುತ್ತಿದ್ದ ಕೆರೆಗೆ ಕಲ್ಯಾಬಾಗಿಲು, ಬಿ.ಕೆ.ರಸ್ತೆ  ಹೊಸ ಮಸೀದಿ ಮೊಹಲ್ಲಾದಿಂದ ಹರಿದು ಬರುವ ಮನೆಗಳ ಶೌಚಾಲಯದ ಕಲುಷಿತವನ್ನು ಸಂಗ್ರಹಿಸಲಾಯಿತು. ಇದರಿಂದ ಕೆರೆ ಕೊಚ್ಚೆ ಗುಂಡಿಯಾಗಿದೆ ಎಂದರು.

ADVERTISEMENT

ಸಕಲ ಸಾಂಕ್ರಾಮಿಕ ರೋಗಗಳ ತಾಣವಾಗಿದೆ, ನಾಲ್ಕು ವರ್ಷಗಳ ಹಿಂದೆ ಮಾಗಡಿ ಯೋಜನಾ ಪ್ರಾಧಿಕಾರದ ವತಿಯಿಂದ ₹5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕೆರೆಯಲ್ಲಿ ಆಧುನಿಕ ಶೈಲಿಯ ಈಜುಕೊಳ, ವಾಕಿಂಗ್‌ ಪಾತ್‌ , ನಿರ್ಮಿಸುವುದಾಗಿ ಯೋಜನೆ ತಯಾರಿಸಲಾಗಿತ್ತು. ಕೆರೆಯ ಸುತ್ತ ಮುತ್ತ ಚರಂಡಿ ನಿರ್ಮಿಸಿ, ತಂತಿಬೇಲಿ ಹಾಕಲಾಗಿತ್ತು. ₹5 ಕೋಟಿ ಹಣ ಖರ್ಚಾದರೂ ಕೆರೆಯ ಸಹಜ ಸೌಂದರ್ಯ ಮತ್ತೆ ಮರಳಲಿಲ್ಲ ಎಂದರು.

ಕೆರೆಯಲ್ಲಿ ದುರ್ಗಂಧಯುಕ್ತ ನೀರು ಸಂಗ್ರಹವಾಗಿದೆ. ಚರಿತ್ರೆ ಕುರುಹು ಸಾರುವ ಕೆರೆಯ ದುರಸ್ತಿಗೆ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕಾದು ನೋಡಿ ಬಳಗದ ವತಿಯಿಂದ ಕೆರೆ ದುರಸ್ತಿಗೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದರು. ಪದಾಧಿಕಾರಿಗಳಾದ ಗಂಗ ನರಸಿಂಹಯ್ಯ, ಶಂಕರಪ್ಪ, ಲಕ್ಷ್ಮೀನರಸಿಂಹಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.