ಕನಕಪುರ: ನಗರದ ನವಾಜಿಬೋರೆ ಬಳಿ ಕೆ.ಬಿ. ಮೆಟಲ್ ಗೋದಾಮಿಗೆ ಬೆಂಕಿ ಬಿದ್ದು ಅದರಲ್ಲಿರುವ ಸಾಮಗ್ರಿಗಳು ಸುಟ್ಟು ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಶುಕ್ರವಾರ ನಡೆದಿದೆ.
ನಗರಸಭೆಯ ಮಾಜಿ ಅಧ್ಯಕ್ಷ ಅಮೀರ್ ಖಾನ್ ಮಗ ಖಲಿದ್ ಖಾನ್ ಅವರಿಗೆ ಸೇರಿದ ಗೋದಾಮು ಬೆಂಕಿಗೆ ಆಹುತಿಯಾಗಿದೆ. ಅದರಲ್ಲಿದ್ದ ಖಾಲಿ ರಟ್ಟಿನ ಬಾಕ್ಸ್, ಬಿಳಿ ಕಾಗದ ಸೇರಿದಂತೆ ಕೈಗಾರಿಕೆಗಳಿಂದ ತಂದಿದ್ದ ತ್ಯಾಜ್ಯವಸ್ತುಗಳಿಗೆ ಬೆಂಕಿ ತಗುಲಿದೆ. ಮಧ್ಯಾಹ್ನದ ವೇಳೆಗೆ ಗೋದಾಮಿನಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದ್ದು ಪ್ರಾರ್ಥನೆಗೆಂದು ಹೋದಾಗ ವಿಚಾರ ಗೊತ್ತಾಯಿತು, ಗೋದಾಮಿಗೆ ಯಾವ ರೀತಿ ಬೆಂಕಿ ಬಿದ್ದಿದೆ ಎಂದು ಗೊತ್ತಾಗಿಲ್ಲ, ಕೈಗಾರಿಕೆಗಳಿಂದ ಬರುವ ಕಚ್ಚಾವಸ್ತುಗಳನ್ನು ಸಂಗ್ರಹಿಸಿ ಮತ್ತೆ ಮರುಬಳಕೆಗೆ ಕಂಪೆನಿಗಳಿಗೆ ಕಳಿಸಿಕೊಡುತ್ತಿದ್ದುದಾಗಿ ಅವರು ತಿಳಿಸಿದ್ದಾರೆ.
ಅಕ್ಕಪಕ್ಕದಲ್ಲಿದ್ದ ಮನೆಗಳಿಗೂ ಬೆಂಕಿ ತಗುಲಿದೆ, ತಕ್ಷಣ ಅಗ್ನಿ ಶಾಮಕ ದಳದವರು ಬಂದು ಕಾರ್ಯಾಚರಣೆ ಮಾಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಬೆಂಕಿ ಉರಿಯುತ್ತಿದ್ದ ಪಕ್ಕದ ಮನೆಯಲ್ಲಿ ಬಾಣಂತಿ, ಸಣ್ಣಮಗು ಮತ್ತು ಅಂಗವಿಕಲ ವ್ಯಕ್ತಿಯಿದ್ದರು, ಸ್ಥಳೀಯರು ತಕ್ಷಣ ಹೋಗಿ ಮನೆಯಲ್ಲಿದ್ದವರನ್ನು ರಕ್ಷಿಸಿದರು.
ದಾಮು ಸುತ್ತಲಿನ ಪ್ರದೇಶದಲ್ಲಿ ಬೆಸ್ಕಾಂ ಇಲಾಖೆ ಎರಡು ತಾಸುಗಳ ಕಾಲ ವಿದ್ಯುತ್ ಕಡಿತಗೊಳಿಸಿದ್ದರು. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಗೆ ಗೋದಾಮಿನ ಮಾಲೀಕರು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.