ಕನಕಪುರ: ಬುಧವಾರ ರಾತ್ರಿ ಇಲ್ಲಿನ ಹುಲಿಬೆಲೆ ದೊಡ್ಡಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವಗಳು ಶುಕ್ರವಾರ ಪತ್ತೆಯಾದವು. ಕೂನೂರು ಶಿವನಾಕೇಶ್ವರ ದೇವಸ್ಥಾನದ ಬಳಿ ಎಂ.ಜಿ.ತಿಮ್ಮಯ್ಯ ಅವರ ಶವವು ಮೊದಲಿಗೆ ದೊರೆಯಿತು. ಅಲ್ಲಿಂದ ಎರಡು ಕಿಲೋಮೀಟರ್ ಅಂತರದಲ್ಲಿ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಅಜಯ್ ಅವರ ಶವ ಸಿಕ್ಕಿದೆ.
ಮೃತದೇಹಗಳು ಹುಲಿಬೆಲೆ ದೊಡ್ಡ ಹಳ್ಳದಿಂದ ಸುಮಾರು 5 ಕಿ.ಮೀ ದೂರಕ್ಕೆ ಹೋಗಿದ್ದವು. ಹಿನ್ನೀರಿನ ಪಕ್ಕದ ಜಾಡಿನಲ್ಲಿ ದೇಹಗಳು ಸಿಕ್ಕಿಕೊಂಡು ಮುಂದೆ ಹೋಗಲು ಸಾಧ್ಯವಾಗಿರಲಿಲ್ಲ.
ಶುಕ್ರವಾರ ಬೆಳಿಗ್ಗೆಯಿಂದಲೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ನುರಿತ ಈಜುಗಾರರು ಶೋಧ ಕಾರ್ಯಾ ಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಸಿಪಿಐ ಸಿದ್ದೇಗೌಡ, ಸಬ್ ಇನ್ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆಯು ನಡೆಯಿತು.
ಆಕ್ರಂದನ: ದುರ್ಘಟನೆಯಲ್ಲಿ ಮೃತಪಟ್ಟ ಇಬ್ಬರೂ ಚನ್ನಪಟ್ಟಣ ತಾಲ್ಲೂಕಿನ ಮೊಳೇದೊಡ್ಡಿ ಗ್ರಾಮದವರಾಗಿದ್ದು, ಶವಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ತರಲಾಗಿತ್ತು. ಅಲ್ಲಿ ಈ ಇಬ್ಬರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.ಪರಿಹಾರಕ್ಕೆ ಒತ್ತಾಯ: ಹಳ್ಳದಲ್ಲಿ ಕೊಚ್ಚಿ ಹೋದ ಇಬ್ಬರ ಕುಟುಂಬದವರಿಗೂ ಸೂಕ್ತ ಪರಿಹಾರ ನೀಡುವಂತೆ ಅವರ ಸಂಬಂಧಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.