ಚನ್ನಪಟ್ಟಣ: ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಜೀತದಾಳುಗಳಿಗೆ ಪುನರ್ವಸತಿ ಕಲ್ಪಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಜೀತ ವಿಮುಕ್ತಿ ಕರ್ನಾಟಕ ತಾಲ್ಲೂಕು ಘಟಕದ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಬಿ.ಎಂ. ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಹೊರಟ ಜೀವಿಕ ಸಂಘಟನೆ ಪದಾಧಿಕಾರಿಗಳು ನಂತರ ತಾಲ್ಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಡಿಎಸ್ಎಸ್ ಸಂಚಾಲಕ ಕುಮಾರ್ ಮಾತನಾಡಿ, ಡಾ.ಅಂಬೇಡ್ಕರ್ ನೀಡಿರುವ ದೇಶದ ಸಂವಿಧಾನದಲ್ಲಿ ಸರ್ವರಿಗೂ ನ್ಯಾಯ, ಸಮಾನತೆ ಸ್ವಾತಂತ್ರ, ಸೋದರತ್ವ ನೀಡಿದೆ.
ಸಂವಿಧಾನ ಜಾರಿಗೆ 68 ವರ್ಷ ಕಳೆದರೂ ಜಿಲ್ಲೆಯಲ್ಲಿ ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸಿಲ್ಲ. ಈ ಕುರಿತು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ಗೆ ಮನವಿ ಸಲ್ಲಿಸುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಜೊತೆಗೆ ಪ್ರತಿಭಟನೆ ಮೂಲಕ ಒತ್ತಡ ತರುತ್ತಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಇದು ನಮ್ಮ ಸಂವಿಧಾನದಲ್ಲಿನ ಆಡಳಿತದ ಕಾರ್ಯವೈಖರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು ಕೂಡ ಕೆಲ ಭೂಮಾಲೀಕರು ಮನುಷ್ಯನನ್ನು ಪಶುವಂತೆ ನಡೆಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದರು.
ಜೀವಿಕ ಸಂಘಟನೆಯ ರಾಜ್ಯ ಸಂಚಾಲಕ ಹನುಮಂತಯ್ಯ ಮಾತನಾಡಿ, ತಾಲ್ಲೂಕು ಜೀವಿಕ ಸಂಘಟನೆಯ ಕಾರ್ಯಕರ್ತರು 2001 ರಿಂದ 2016ರ ವರಗೆ 240 ಮಂದಿ ಜೀತದಾಳುಗಳನ್ನು ಗುರುತಿಸಿದ್ದು, ಅವರ ಬಿಡುಗಡೆ ಮತ್ತು ಪುನರ್ವಸತಿಗಾಗಿ ಮನವಿ ಸಲ್ಲಿಸುತ್ತಾ ಬಂದಿದ್ದರೂ ಇದುವರೆಗೂ ಯಾವುದೇ ಕ್ರಮ ತಗೆದುಕೊಳ್ಳದೆ ಅವರಿಗೆ ಬಿಡುಗಡೆ ಭಾಗ್ಯ ಸಿಕಿಲ್ಲ. ಸರ್ಕಾರ 2015ರ ಸುತ್ತೋಲೆ ಪ್ರಕಾರ ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ತನಿಖೆ ಮಾಡಿ ಬಿಡುಗಡೆ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೀವಿಕ ಜಿಲ್ಲಾ ಸಂಚಾಲಕ ಗಂಗಹನುಮಯ್ಯ, ತಾಲ್ಲೂಕು ಮಹಿಳಾ ಸಂಚಾಲಕಿ ಬಿ.ಕೆ. ಯಶೋಧ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಡಿಎಸ್ಎಸ್ ತಾಲೂಕು ಸಂಚಾಲಕ ಶೇಟು, ಹೋಬಳಿ ಸಂಚಾಲಕಿ ಗಂಗಾ, ತಾಲ್ಲೂಕು ಸಂಚಾಲಕ ಎಚ್.ಎಸ್.ಸಿದ್ದಯ್ಯ, ಗ್ರಾ.ಪಂ.ಸದಸ್ಯ ಜಯರಾಮು, ಮಮತಾ, ಶಂಕರ್, ಗಂಗಾಧರ್, ಸಿದ್ದಯ್ಯ ಮುಂತಾದವರು ಭಾಗವಹಿಸಿದ್ದರು. ತಾಲ್ಲೂಕು ಕಚೇರಿ ಶಿರಸ್ತೇದಾರ್ ಮುನಿರಾಜಯ್ಯ ಅವರಿಗೆ ಮನವಿ ಪತ್ರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.