ಮಾಗಡಿ: ತಾಲ್ಲೂಕಿನ ವೆಂಗಳಪ್ಪನ ತಾಂಡ್ಯ ಬಳಿ ಬೆಟ್ಟದ ರಂಗನ ಗುಡಿಯ ಬಳಿ ಕ್ರಷರ್ಗಳಲ್ಲಿ ಭಾರಿ ಸಿಡಿಮದ್ದು ಸಿಡಿಸಲಾಗುತ್ತಿದೆ. ಅವುಗಳಿಂದ ನಿತ್ಯ ನೂರಾರು ಟಿಪ್ಪರ್ಗಳಲ್ಲಿ ಜಲ್ಲಿಕಲ್ಲು, ದೊಡ್ಡ ಜಲ್ಲಿ, ಕಲ್ಲಿನ ಪುಡಿ ಸಾಗಿಸಲಾಗುತ್ತಿದೆ. ಟಿಪ್ಪರ್ಗಳಲ್ಲಿ ಕಲ್ಲಿನ ಪುಡಿ ಸಾಗಿಸುವಾಗ ಟಾರ್ಪಾಲ್ ಬಳಸುತ್ತಿಲ್ಲ ಎಂದು ಧನಂಜಯ್ ನಾಯ್ಕ್ ದೂರಿದ್ದಾರೆ.
ಮಾಗಡಿ– ಬೆಂಗಳೂರು ರಸ್ತೆಯ ಬಾಚೇನ ಹಟ್ಟಿ, ವರದೋನ ಹಳ್ಳಿ, ಚಿಕ್ಕತೊರೆಪಾಳ್ಯ, ಮರಲಗೊಂಡಲ ಗ್ರಾಮಗಳ ಬಳಿ ರಸ್ತೆ ತೀರಾ ಹದಗೆಟ್ಟಿದೆ. ಎರಡು ಅಡಿ ಆಳದ ನೂರಾರು ಗುಂಡಿಗಳು ಇವೆ. ವಾಹನ ಸವಾರರು ಒಂದು ಗುಂಡಿ ತಪ್ಪಿಸಲು ಮತ್ತೊಂದು ಗುಂಡಿಗೆ ಇಳಿಯಬೇಕಿದೆ. ರಸ್ತೆಯಲ್ಲಿನ ಗುಂಡಿಗಳ ಬಗ್ಗೆ ತಿಳಿಯದವರು ನಿತ್ಯ ಬಿದ್ದು ಕೈಕಾಲು ಮುರಿದುಕೊಂಡು ಗಾಯಗೊಳ್ಳುತ್ತಿದ್ದಾರೆ ಎಂದಿದ್ದಾರೆ.
ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕ ವಾಹನಳಿಗೆ ಜಲ್ಲಿಪುಡಿ ಸಾಗಿಸುವ ಟಿಪ್ಪರ್ಗಳ ಚಾಲಕರು ರಸ್ತೆಯಲ್ಲಿ ದಾರಿ ಬಿಡುವುದಿಲ್ಲ. ಟಿಪ್ಪರ್ನಿಂದ ಜಲ್ಲಿಕಲ್ಲು ಹಾರಿ ಬಂದು ಹಿಂದೆ ಬರುವ ವಾಹನಗಳ ಗಾಜಿಗೆ ಸಿಡಿಯುತ್ತಿವೆ. ಕಳೆದ ವಾರ ಜಿಲ್ಲಾಧಿಕಾರಿ ಕಾರಿಗೆ ಕ್ರಷರ್ನ ಟಿಪ್ಪರ್ಗಳ ಕಲ್ಲು ಸಿಡಿಯಿತು ಎಂದು ಸಾರಿಗೆ ಅಧಿಕಾರಿಗಳು 7 ಟಿಪ್ಪರ್ಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಕಠಿಣ ಕ್ರಮಕೈಗೊಳ್ಳುವ ಬದಲು ಮಾರನೇ ದಿನವೇ ಬಿಟ್ಟು ಕಳಿಸಿದ್ದಾರೆ. ಟಿಪ್ಪರ್ ಚಾಲಕರು ಅತಿವೇಗವಾಗಿ ಓಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಟಿಪ್ಪರ್ಗಳ ಹಾವಳಿ ತಡೆಗಟ್ಟಿ, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸುವಂತೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.