ADVERTISEMENT

ಮಲಿನಗಳ ಒಡಲಾದ ‘ಅರ್ಕಾವತಿ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 11:08 IST
Last Updated 14 ಜುಲೈ 2017, 11:08 IST
ರಾಮನಗರದ ಅರ್ಕಾವತಿ ನದಿ ಪಾತ್ರದಲ್ಲಿ ತ್ಯಾಜ್ಯ ಎಸೆದಿರುವುದು
ರಾಮನಗರದ ಅರ್ಕಾವತಿ ನದಿ ಪಾತ್ರದಲ್ಲಿ ತ್ಯಾಜ್ಯ ಎಸೆದಿರುವುದು   

ರಾಮನಗರ: ನಗರದ ಮೂಲಕ ಹಾದು ಹೋಗಿರುವ ಅರ್ಕಾವತಿ ನದಿ ಪಾತ್ರ ಸಾಂಕ್ರಾಮಿಕ ರೋಗಗಳ ತವರಾಗಿದೆ. ಒಂದು ಕಡೆ ನಿರಂತರವಾಗಿ ಮರಳು ಲೂಟಿಯಾಗುತ್ತಿದೆ. ಇನ್ನೊಂದೆಡೆ ನೀರಿನ ಹರಿವಿಲ್ಲದೆ, ನದಿ ಪಾತ್ರದಲ್ಲಿ ಜೊಂಡು ಮತ್ತಿತರ ಗಿಡಗಳು ಬೆಳೆದಿವೆ. ನದಿಯ ಪರಿಸರ ಮಲೀನವಾಗಿದೆ. ಇಷ್ಟು ಸಾಲದೆಂಬಂತೆ ಕೆಲವರು ತಮ್ಮ ಅಂಗಡಿ, ಮನೆ ತ್ಯಾಜ್ಯವನ್ನೆಲ್ಲ ನದಿ ಪಾತ್ರಕ್ಕೆ ಎಸೆದು ಇನ್ನಷ್ಟು ಮಲೀನಗೊಳಿಸುತ್ತಿದ್ದಾರೆ.

ಅರ್ಕಾವತಿ ನದಿ ಪಾತ್ರಕ್ಕೆ ಹೀಗೆ ತ್ಯಾಜ್ಯವನ್ನು ಎಸೆಯುವುದರಿಂದ ಇದು ಕೊಳೆತು, ಕ್ರಿಮಿಕೀಟಗಳು, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ನಗರವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜತೆಗೆ ವಾಯು ಮಾಲಿನ್ಯಕ್ಕೂ ಕಾರಣವಾಗುತ್ತಿದೆ.

ಸಿಸಿಟಿವಿ ಕ್ಯಾಮೆರಾ ಅಳವಡಿಸಿ : ‘ನದಿ ಪಾತ್ರಕ್ಕೆ ತ್ಯಾಜ್ಯ ಎಸೆಯುತ್ತಿರುವ ವಿಚಾರ  ನಗರಸಭೆಯ ಗಮನಕ್ಕೆ ತರಲಾಗಿದೆ. ಆದರೆ, ತ್ಯಾಜ್ಯ ಎಸೆಯುವುದನ್ನು ನಗರ ಸಭೆ  ಸಿಬ್ಬಂದಿ ದಿನದ 24 ಗಂಟೆಯೂ ಕಾದು ಕುಳಿತುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಗರಸಭೆಯ ಅಧಿಕಾರಿಗಳು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ತ್ಯಾಜ್ಯ ಎಸೆಯುತ್ತಿರುವವರು ಯಾರು ಎಂಬುದನ್ನು ಪತ್ತೆ ಹಚ್ಚಿ, ಕ್ರಮ ತೆಗೆದುಕೊಳ್ಳಬೇಕು’ ಎಂದು ವ್ಯಾಪರಸ್ಥ ಆರ್.ಸಿ. ರಾಮಚಂದ್ರ ಅವರು ತಿಳಿಸಿದರು.

ADVERTISEMENT

‘ನಗರದಲ್ಲಿ ಈಗಾಗಲೆ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ನಾವು ಮನೆಯಲ್ಲಿ ಎಷ್ಟೆ ಸುರಕ್ಷಿತೆಯಿಂದ ಇದ್ದರೂ, ಅರ್ಕಾವತಿ ನದಿ ಅಕ್ಕಪಕ್ಕದಲ್ಲಿರುವ ಬಡಾವಣೆಯ ಮನೆಗಳಿಗೆ ಸೊಳ್ಳೆಗಳು ದಾಳಿ ಇಡುತ್ತಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಯವರು ಅರ್ಕಾವತಿ ನದಿಯಲ್ಲಿನ ತ್ಯಾಜ್ಯ ಸ್ವಚ್ಛಗೊಳಿಸಿ, ಕ್ರೀಮಿಕೀಟ ನಾಶವಾಗುವಂತಹ ರಾಸಾಯನಿಕ ಸಿಂಪಡಿಸಬೇಕು’ ಎಂದು ತಿಳಿಸಿದರು.

ನದಿಯನ್ನು ಶುದ್ಧೀಕರಣಗೊಳಿಸಿ: ‘ನಗರ ದಲ್ಲಿರುವ ಸಂಘ– ಸಂಸ್ಥೆಗಳು, ಸಂಘಟ ನೆಗಳು ಎಲ್ಲರೂ ಒಂದಾಗಿ ಅರ್ಕಾವತಿ ನದಿಯನ್ನು ಶುಚಿಗೊಳಿಸಲು ಮುಂದಾಗ ಬೇಕು. ಹಲವು ಕಾಲೇಜುಗಳು ಎನ್‌ಎಸ್‌ ಎಸ್ ಶಿಬಿರ ಹಮ್ಮಿಕೊಂಡು ಮಲೀನ ವಾಗಿರುವ ಜೀವನದಿ  ಸ್ವಚ್ಛಗೊಳಿ ಸಬೇಕು. ಎಲ್ಲಾ ಕೆಲಸಗಳಿಗೂ ಸರ್ಕಾರ ವನ್ನೇ ನಂಬಿ ಕುಳಿತರೆ ಮುಂದೊಂದು ದಿನ ಇಲ್ಲಿ ಅರ್ಕಾವತಿ ನದಿ ಇತ್ತು ಎಂಬುದು ಮುಂದಿನ ತಲೆಮಾರಿಗೆ ಮರೆತು ಹೋಗುತ್ತದೆ’ ಎನ್ನುತ್ತಾರೆ ಸಂಸ್ಕೃತಿ ಸೌರಭ ಟ್ರಸ್ಟಿನ ಅಧ್ಯಕ್ಷ ರಾ.ಬಿ. ನಾಗರಾಜ್‌.

‘ಅರ್ಕಾವತಿ ನದಿಗೆ ಹಲವು ಕಡೆ ಮೋರಿ ನೀರನ್ನು ಬಿಡಲಾಗಿದೆ. ಮೋರಿ ನೀರನ್ನು ನದಿಗೆ ಬಿಡುವುದನ್ನು ತಡೆಯಬೇಕು. ನದಿಯನ್ನು ಶುದ್ದೀಕರಣ ಗೊಳಿಸಿದರೆ ಮಳೆಗಾಲದಲ್ಲಾದರೂ ನದಿಯಲ್ಲಿ ನೀರು ಹರಿಯುತ್ತದೆ. ಪೂರ್ತಿ ನದಿಯನ್ನು ಶುದ್ಧೀಕರಣ ಮಾಡಲು ಆಗದಿದ್ದರೆ ನಗರವ್ಯಾಪ್ತಿಯಲ್ಲಿ ಹರಿ ಯುವಷ್ಟನ್ನಾದರೂ ಸ್ವಚ್ಛಗೊಳಿಸ ಬೇಕು’ ಎಂದು ತಿಳಿಸಿದರು.

ವೈಭವ ಮತ್ತೆ ಮರುಕಳಿಸಲಿ: ‘ನಗರದ ಮಧ್ಯಭಾಗದಲ್ಲಿ ಹರಿಯುವ ಅರ್ಕಾವತಿ ನದಿಯ ದಂಡೆಯಲ್ಲಿ ಪುರಾತನವಾದ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯವಿದೆ. ಜತೆಗೆ ಶನಿಮಹಾತ್ಮ ದೇವಾಲಯ, ಶ್ರೀ ರಾಮ ದೇವಾಲಯ, ಆಂಜನೇಯ ದೇವಾಲಯ, ರಾಘವೇಂದ್ರಸ್ವಾಮಿ ದೇವಾಲಯಗಳು ಈ ನದಿಗೆ ಹೊಂದಿಕೊಂಡಂತೆ ಇವೆ’ ಎಂದರು.

‘ಈ ದೇವಾಲಯಗಳಿಗೆ ಬರುತ್ತಿದ್ದ ಭಕ್ತಾದಿಗಳೆಲ್ಲರೂ ನದಿಯ ಸೌಂದರ್ಯ ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ನದಿಯನ್ನು ಶುದ್ಧೀಕರಣಗೊಳಿಸಿದರೆ ಕಳೆದ 30 ವರ್ಷಗಳ ಹಿಂದೆ ಇದ್ದ ವೈಭವ ಮತ್ತೆ ಮರುಕಳಿಸಲಿದೆ. ಜತೆಗೆ ನಗರದ ಸೌಂದರ್ಯವೂ ಹೆಚ್ಚಾಗುತ್ತದೆ, ನಗರ ವ್ಯಾಪ್ತಿಯಲ್ಲಿ ಹರಡುವ ಸಾಂಕ್ರಾಮಿಕ ರೋಗ ತಡೆಗಟ್ಟಬಹುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.