ADVERTISEMENT

ಮೂರು ಅಂಗಡಿ ಸುಟ್ಟು ಭಸ್ಮ

ಶ್ರೀಗಿರಿಪುರದಲ್ಲಿ ಬೆಂಕಿ ಅವಘಡದಿಂದ ಹಾನಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 10:26 IST
Last Updated 24 ಜನವರಿ 2017, 10:26 IST
ಮೂರು ಅಂಗಡಿ ಸುಟ್ಟು ಭಸ್ಮ
ಮೂರು ಅಂಗಡಿ ಸುಟ್ಟು ಭಸ್ಮ   

ಕುದೂರು(ಮಾಗಡಿ): ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಗುಡಿಸಲಿನಲ್ಲಿ ನಡೆಯುತ್ತಿದ್ದ ಹೋಟೆಲ್‌, ಕ್ಷೌರದ ಅಂಗಡಿ, ಪೆಟ್ಟಿಗೆಯಲ್ಲಿದ್ದ ಕಿರಾಣಿ ಅಂಗಡಿ ಸುಟ್ಟು ಭಸ್ಮವಾಗಿರುವ ದುರಂತ ಘಟನೆ ಭಾನುವಾರ ತಡರಾತ್ರಿ ಶ್ರೀಗಿರಿಪುರದಲ್ಲಿ ನಡೆದಿದೆ.

ಗಂಗಹನುಮಯ್ಯ ನಡೆಸುತ್ತಿದ್ದ ಹೋಟೆಲ್‌ನಲ್ಲಿ ಇದ್ದ ಎರಡು ಸಿಲಿಂಡರ್‌ ಸಿಡಿದು ಅರ್ಧ ಕಿ.ಮೀ ದೂರದಲ್ಲಿದ್ದ ಜಗನ್ನಾಥ ಶೆಟ್ಟಿ ಅವರ ಎಡಗೈಗೆ ಗಂಭೀರ ಗಾಯವಾಗಿದೆ. ಹೋಟೆಲ್‌ ಮಾಲೀಕರಿಗೆ ₹1.50 ಲಕ್ಷ ನಷ್ಟವಾಗಿದೆ.

ಮಂಜುನಾಥ ಅವರು ನಡೆಸುತ್ತಿದ್ದ ಕ್ಷೌರದ ಅಂಗಡಿ ಸುಟ್ಟುಹೋಗಿದ್ದು, ₹75 ಸಾವಿರ ನಷ್ಟವಾಗಿದೆ. ರವಿಕುಮಾರ್‌ ನಡೆಸುತ್ತಿದ್ದ ಪೆಟ್ಟಿಗೆ ಅಂಗಡಿಯಲ್ಲಿದ್ದ 1 ಸಿಲಿಂಡರ್‌ ಸಿಡಿದು, ಅಂಗಡಿಯಲ್ಲಿದ್ದ ದಿನಸಿ ಸುಟ್ಟು ಭಸ್ಮವಾಗಿದೆ.  ಇದರಿಂದ ₹60 ಸಾವಿರ ನಷ್ಟವಾಗಿದೆ ಎಂದು ಬೆಂಕಿಗೆ ಆಹುತಿಯಾದ ಅಂಗಡಿ ಮಾಲೀಕ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ವಾಹನ ತರಿಸಿ ಬೆಂಕಿ ನಂದಿಸಲಾಯಿತು. ಸುದ್ದಿ ತಿಳಿದ ತಕ್ಷಣ ಕುದೂರು ಪಿಎಸ್‌ಐ ಹರೀಶ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.  ಪ್ರಕರಣ ದಾಖಲಾಗಿದೆ.

ಶ್ರೀಗಿರಿಪುರದಲ್ಲಿ  ಇತರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ.  ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಬೀಡಿ ಸೇದಿ ಎಸೆದುದರಿಂದ ಗುಡಿಸಲಿನಲ್ಲಿದ್ದ ಹೋಟೆಲ್‌ ಮತ್ತು ಇತರೆ ಅಂಗಡಿಗಳಿಗೆ ಬೆಂಕಿ ತಗುಲಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳು ಯಾರೂ ಸ್ಥಳಕ್ಕೆ ಭೇಟಿ ನೀಡದ ಬಗ್ಗೆ ಈ ಬಡ ಕುಟುಂಬದವರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.