ADVERTISEMENT

ರಾಜಕೀಯ ಶಕ್ತಿ ಹೆಚ್ಚಳಕ್ಕೆ ವಿಸ್ತಾರಕ್‌ ಕಾರ್ಯಕ್ರಮ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 10:58 IST
Last Updated 8 ಜುಲೈ 2017, 10:58 IST

ಸಾತನೂರು (ಕನಕಪುರ): ದೇಶ ಮೊದಲು ಎಂಬುದನ್ನು ಜನತೆಗೆ ಅರ್ಥೈಸಿ ರಾಜಕೀಯ ಶಕ್ತಿಯನ್ನು ಬಲಗೊಳಿಸಲು ವಿಸ್ತಾರಕ್‌ ಕಾರ್ಯಕ್ರಮವನ್ನು ದೇಶದೆಲ್ಲೆಡೆ ನಡೆಸಲಾಗುತ್ತಿದೆ ಎಂದು ಬಿ.ಜೆ.ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ತಾಲ್ಲೂಕಿನ ಸಾತನೂರು ಹೋಬಳಿ ಹೊನ್ನಿಗನಹಳ್ಳಿ ಗ್ರಾಮದಲ್ಲಿನ ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್‌.ಜಗನ್ನಾಥ್‌ ಅವರ ಮನೆಯಲ್ಲಿ ದೀನ್‌ ದಯಾಳ್‌ ಉಪಾಧ್ಯಾಯ ಅವರ ಜನ್ಮ ಶತಾಬ್ದಿ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಬಿ.ಜೆ.ಪಿ. ವಿಸ್ತಾರಕ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷವು ದೇಶದ ಹಿತಕ್ಕಿಂತ ನೆಹರೂ ಕುಟುಂಬದ ಹಿತವೇ ಮುಖ್ಯವಾಗಿದೆ, ಆ ಕುಟುಂಬದ ವಂಶಸ್ಥರ ಹಿಡಿತದಲ್ಲೇ ಪಕ್ಷ ಮುನ್ನಡೆಯಬೇಕು, ಅವರು ಸೂಚಿಸಿದವರೇ ರಾಜಕೀಯ ಲಾಭ ಮತ್ತು ಅಧಿಕಾರ ಪಡೆಯಬೇಕು, ಆ ಕುಟುಂಬವಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವವಿಲ್ಲದಂತಾಗಿದೆ ಎಂದರು.

ADVERTISEMENT

ಬಿ.ಜೆ.ಪಿ.ಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ಅವಕಾಶವಿದೆ, ಸಾಮಾನ್ಯ ಕಾರ್ಯಕರ್ತನಿಂದ ದೇಶದ ಪ್ರಧಾನಿ ಆಗುವವರೆಗೂ ಯಾವುದೇ ರಾಜಕೀಯ ಶಕ್ತಿ ಮತ್ತು ರಾಜಕೀಯ ಕುಟುಂಬದ ಹಿನ್ನೆಲೆ ಬೇಕಿಲ್ಲ ಎಂದರು.

ದೇಶದಲ್ಲಿ ದೊಡ್ಡ ಬದಲಾವಣೆಯಾಗಲಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವವೇ ಒಪ್ಪುವಂತ ಕೆಲಸಗಳನ್ನು ಮಾಡುತ್ತಿದ್ದಾರೆ, ಅವರು ಕೈಗೊಂಡಿರುವ ಕೆಲಸಗಳನ್ನು ವಿಶ್ವ ಎದುರು ನೋಡುತ್ತಿದೆ ಎಂದರು.

ಬಿ.ಜೆ.ಪಿ. ನಗರ ಘಟದಲ್ಲಿ ನಾಲ್ಕು ಸ್ಥಳಗಳಲ್ಲಿ, ತಾಲ್ಲೂಕು ಘಟಕದಲ್ಲಿ ತೋಟಳ್ಳಿ, ಸಾಸಲಾಪುರ, ಹೊನ್ನಿಗನಹಳ್ಳಿ, ಹೂಕುಂದ ಗ್ರಾಮದಲ್ಲಿ ವಿಸ್ತಾರಕ್‌ ಕಾರ್ಯಕ್ರಮವನ್ನು ಬೂತ್‌ ಮಟ್ಟದ ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಲಾಯಿತು.

ಬಿ.ಜೆ.ಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಜಗನ್ನಾಥ್, ಉಪಾಧ್ಯಕ್ಷ ರವೀಂದ್ರಬಾಬು, ತಾಲ್ಲೂಕು ಘಟಕದ ಅಧ್ಯಕ್ಷ ಟಿ.ವಿ.ರಾಜು, ನಗರ ಘಟಕದ ಅಧ್ಯಕ್ಷ ಕೃಷ್ಣಪ್ಪ, ಬಿ.ಎಲ್‌.ಶ್ರೀನಿವಾಸ್‌, ಕೃಷ್ಣೇಗೌಡ, ಕೆ.ಟಿ.ಕುಮಾರಸ್ವಾಮಿ, ಆನಂದ್‌, ಮುನಿಲಿಂಗೇಗೌಡ, ನಾಗರಾಜು, ಮಹೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.