ADVERTISEMENT

ರೈಲು ನಿಲ್ದಾಣದಲ್ಲಿ ಸೌಕರ್ಯ ಕೊರತೆ

ರಾಮನಗರ – ಶೌಚಾಲಯಗಳಿಗೆ ಸೂಚನಾ ಫಲಕ ಅಳವಡಿಸದೆ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಮೇ 2017, 7:49 IST
Last Updated 22 ಮೇ 2017, 7:49 IST
ರಾಮನಗರದ ರೈಲ್ವೆ ನಿಲ್ದಾಣದಲ್ಲಿ ನೋ ಪಾರ್ಕಿಂಗ್ ಬೋರ್ಡ್‌ ಪಕ್ಕದಲ್ಲಿಯೇ  ನಿಂತಿರುವ ವಾಹನಗಳು.
ರಾಮನಗರದ ರೈಲ್ವೆ ನಿಲ್ದಾಣದಲ್ಲಿ ನೋ ಪಾರ್ಕಿಂಗ್ ಬೋರ್ಡ್‌ ಪಕ್ಕದಲ್ಲಿಯೇ ನಿಂತಿರುವ ವಾಹನಗಳು.   

ರಾಮನಗರ: ನಗರದ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳಿದ್ದರೂ, ಅವು ಎಲ್ಲಿವೆ ಎಂದು ಹುಡುಕುವುದೇ ಸವಾಲಿನ ಕೆಲಸವಾಗಿದೆ.

ಸೂಚನಾ ಫಲಕ ಅಳಡಿಸದೆ ಇರುವುದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗುತ್ತಿದೆ. ಇಲ್ಲಿರುವ ಒಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಬಳಸಲು ಪ್ರಯಾಣಿಕರು ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ.

‘ರೈಲ್ವೆ ನಿಲ್ದಾಣದಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸಿದರೂ ಸಂಬಂಧಪಟ್ಟವರು ಪ್ರಶ್ನಿಸುತ್ತಿಲ್ಲ. ರಾಮನಗರ ಜಿಲ್ಲಾ ಕೇಂದ್ರವಾಗಿ 10 ವರ್ಷಗಳಾದರೂ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳಿಲ್ಲ’ ಎಂದು ಪ್ರತಿನಿತ್ಯ ಪ್ರಯಾಣಿಸುವ ಟ್ರೂಪ್‌ಲೈನ್‌ನ ರಾಮು ಆರೋಪಿಸುತ್ತಾರೆ.

‘ರೈಲ್ವೆ ಇಲಾಖೆಯಿಂದ ಅನೇಕ ಸವಲತ್ತುಗಳು ಇದ್ದರೂ ಇಲ್ಲಿ ಅನುಷ್ಠಾನಗೊಂಡಿಲ್ಲ. ಶೌಚಾಲಯದಲ್ಲಿ ನೀರಿನ ಸಮಸ್ಯೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಅವರು ಆಗ್ರಹಿಸಿದರು.

ನೋ ಪಾರ್ಕಿಂಗ್‌ನಲ್ಲೇ ವಾಹನ ನಿಲುಗಡೆ: ‘ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ವಾಹನಗಳಿಗೆ ಇಲ್ಲಿ ಪಾರ್ಕಿಂಗ್‌ ಗೆ ಅವಕಾಶವಿಲ್ಲ. ಇದರಿಂದ ನೋ ಪಾರ್ಕಿಂಗ್‌ ಬೋರ್ಡ್ ಹಾಕಿರುವ ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ರೈಲ್ವೆ ನಿಲ್ದಾಣದ ಮುಖ್ಯದ್ವಾರದ ಎದುರು ಹಲವು ವಾಹನಗಳು ನಿಂತರೂ  ಕೇಳುವವರಿಲ್ಲದಂತಾಗಿದೆ’ ಎಂದು ಪ್ರಯಾಣಿಕ ಶಬರಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಇಲ್ಲಿ ವಾಹನಗಳು ಕಳುವಾದರೂ ಯಾರನ್ನು ಪ್ರಶ್ನಿಸಬೇಕು ಎಂಬುದು ತಿಳಿಯುವುದಿಲ್ಲ. ಪ್ರಯಾಣಿಕರ ವಾಹನಗಳನ್ನು ದಿನವಿಡೀ ನಿಲ್ಲಿಸಲು ಟಿಕೆಟ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ ಇಲ್ಲಿ ನಿಲ್ಲುವ ವಾಹನಗಳು ನಿಲ್ಲುವ ಬಿಸಿಲು, ಮಳೆಗೆ ತೆರೆದುಕೊಂಡೇ  ನಿಲ್ಲಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ರೈಲ್ವೆ ನಿಲ್ದಾಣದ ಒಳಗೆ ಪ್ರವೇಶಿಸಲು ಪ್ಲಾಟ್‌ಫಾರ್ಮ್‌ ಟಿಕೆಟ್‌ ಪಡೆಯಬೇಕು ಎಂಬ ನಿಯಮವನ್ನು ಇಲ್ಲಿಗೆ ಗಾಳಿಗೆ ತೂರಲಾಗಿದೆ. ಯಾರೂ ಬೇಕಾದರೂ ಮುಕ್ತವಾಗಿ ನಿಲ್ದಾಣ ಪ್ರವೇಶಿಸಬಹುದಾಗಿದೆ. ರಾಮನಗರ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ’ ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.

*
ರಾಮನಗರ ಜಿಲ್ಲಾ ಕೇಂದ್ರವಾಗಿ ದಶಕ ಕಳೆದರೂ ಇಲ್ಲಿನ ರೈಲು ನಿಲ್ದಾಣದಲ್ಲಿ ಅವಶ್ಯ ಸೌಕರ್ಯಗಳಿಲ್ಲ. ರೈಲ್ವೆ ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕು.
-ರಮೇಶ್‌,
ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT