ಮಾಗಡಿ: ‘ರಾಜ್ಯದಲ್ಲಿ ವೀರಶೈವರೆಲ್ಲರೂ ಒಂದಾದರೆ ವಿಧಾನ ಸೌಧ ಗಡಗಡ ನಡುಗುತ್ತದೆ’ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ತಿಳಿಸಿದರು.
ಜಡೇದೇವರ ಮಠದಲ್ಲಿ ವಿಶ್ವ ವೀರಶೈವ ಒಕ್ಕೂಟದ ವತಿಯಿಂದ ಗುರುವಾರ ನಡೆದ ಆದಿಜಗದ್ಗುರು ರೇಣುಕಾಚಾರ್ಯರ ಮತ್ತು ವಿಶ್ವಗುರುಬಸವಣ್ಣ ಹಬ್ಬದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ವೀರಶೈವ ಸಮಾಜ ಬೇಲಿ ಇಲ್ಲದ ಹೊಲವಿದ್ದಂತೆ, ವೀರಶೈವ ಮಠಗಳ ಮತ್ತು ದೇವಾಲಯಗಳ ಭೂಮಿ ಕಿತ್ತುಕೊಂಡರು. ನಮ್ಮ ಮನೆಗೆ ಬಂದು ಎಲ್ಲವನ್ನು ಕಿತ್ತುಕೊಂಡು ಹೋಗುವ ಮುನ್ನ ಎಚ್ಚೆತ್ತುಕೊಂಡು ಸಂಘಟಿತರಾಗ ಬೇಕು ಎಂದರು.
ಮೇ.21ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ದಶಲಕ್ಷ ವೀರಶೈವ ಲಿಂಗಾಯತರ ಸಮಾವೇಶ ನಡೆಯಲಿದೆ. 3 ಸಾವಿರ ವೀರಶೈವ ಮಠಾಧೀಶರು, 28 ಸಾವಿರ ಪುರೋಹಿತರು, 15 ಸಾವಿರ ಶರಣೆಯರು, 5 ಸಾವಿರ ವೀರಗಾಸೆ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಲಿಂಗಾಯತರಿಗೆ ಸಹಾಯ ಮಾಡುವವರಿಗೆ ಮತ ನೀಡಿ, ರಾಜಕಾರಿಣಿಗಳ ಮನೆಯ ಬಾಗಿಲಿಗೆ ಹೋಗಬೇಡಿ ಎಂದು ಜ್ಯೋತಿ ಪ್ರಕಾಶ್ ಮಿರ್ಜಿ ತಿಳಿಸಿದರು.
ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಕೆ.ಪಿ. ರೇಣುಕಾರಾಧ್ಯ ಮಾತನಾಡಿ, ವೀರಶೈವರೆಲ್ಲರೂ ಒಂದೆ ಸಂಘಟಿತರಾಗಿ ನಮ್ಮ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ವಿದ್ವಾನ್ ಮಹದೇವ ಶಾಸ್ತ್ರಿ ಜಡೇದೇವರ ಮಠಾಧೀಶ ಇಮ್ಮಡಿ ಬಸವರಾಜು ಸ್ವಾಮೀಜಿ, ವೀರ ಶೈವ ಮುಖಂಡ ಜಗದೀಶ್, ವೀರಶೈವ ಸಮಾಜ ಅಧ್ಯಕ್ಷ ರುದ್ರಮೂರ್ತಿ, ಆನಂದಪ್ಪ, ಮುದ್ದುವೀರಪ್ಪ, ಪೊಲೀಸ್ ವಿಜಯಕುಮಾರ್, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ವಿಶಾಲಾಕ್ಷಮ್ಮ, ಕೆ.ಟಿ. ಬೃಂಗೇಶ್,ಎಸ್ಐ ಮಂಜುನಾಥ್. ಡಿ.ಆರ್. ದೊಡ್ಡಿ ಮಹದೇವ್, ವೀರೇಶ್, ಜಗದೀಶ್, ಕೆರೆಬೀದಿ ಈಶ, ಆಡನಕುಪ್ಪೆ ಮಹೇಶ್, ಬಸವಣ್ಣ ದೇವರ ಅರ್ಚಕ ಉಮಾಮಹೇಶ್ವರ್, ಚಕ್ರಬಾವಿ ಬಸವರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.