ADVERTISEMENT

‘ಶಾಶ್ವತ ನೀರಾವರಿಗೆ ಅಡಿಪಾಯ ಹಾಕಿಕೊಟ್ಟ ಮೇಧಾವಿ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 10:02 IST
Last Updated 16 ಸೆಪ್ಟೆಂಬರ್ 2017, 10:02 IST

ರಾಮನಗರ: ‘ಕನ್ನಡ ನೆಲದಲ್ಲಿ ಹುಟ್ಟಿ ಹಲವು ಶಾಶ್ವತ ಯೋಜನೆಗಳನ್ನು ನೀಡಿದ ಸರ್ ಎಂ.ವಿಶ್ವೇಶ್ವರಯ್ಯ ಸೇವೆ ಶ್ಲಾಘನೀಯ. ಅವರ ಆದರ್ಶ ಎಲ್ಲರಿಗೂ ಮಾದರಿ’ ಎಂದು ನಿವೃತ್ತ ಮುಖ್ಯ ಎಂಜಿನಿಯರ್‌ ಎಂ.ಎಲ್‌. ಮಾದಯ್ಯ ಹೇಳಿದರು.

ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸರ್‌.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶ್ರದ್ಧೆ, ಶಿಸ್ತು, ಸಮಯಪಾಲನೆ ರೂಢಿಸಿಕೊಂಡು ಎಂಜಿನಿಯರ್ ಪದವಿ ಪಡೆದು ಮೈಸೂರು ದಿವಾನರಾಗಿ ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ರೂಪು ೇಷೆಗಳನ್ನು ಹಾಕಿ ಶಾಶ್ವತ ನೀರಾವರಿಗೆ ಅಡಿಪಾಯ ಹಾಕಿಕೊಟ್ಟ ಮಹಾನ್ ಮೇಧಾವಿ ವಿಶ್ವೇಶ್ವರಯ್ಯ’ ಎಂದರು.

ADVERTISEMENT

ಶಿಕ್ಷಕ ನಂ. ಶಿವಲಿಂಗಯ್ಯ ಮಾತನಾಡಿ ‘ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಯೋಜನೆಗಳು ಹಾಗೂ ಅಭಿವೃದ್ಧಿ ಚಿಂತನೆ ಇಂದಿಗೂ ಪ್ರಸ್ತುತ. ವಿಶ್ವೇಶ್ವರಯ್ಯ ಅವರ ಕರ್ತವ್ಯ ನಿಷ್ಠೆ ಹಾಗೂ ಸಾರ್ವಜನಿಕರ ಕೆಲಸಗಳಲ್ಲಿ ಅವರಿಗಿದ್ದ ಕಾಳಜಿಯನ್ನು ನಾವು ಸ್ಮರಿಸಬೇಕಿದೆ’ ಎಂದು  ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್‌ ಮಾತನಾಡಿ ‘ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಅಂತರರಾಷ್ಟ್ರೀಯ ಮಟ್ಟಕ್ಕೇರಿದ ವಿಶ್ವೇಶ್ವರಯ್ಯನವರ ಸಾಧನೆಯನ್ನು ಮಕ್ಕಳು ಸ್ಫೂರ್ತಿಯಾಗಿರಿಸಿಕೊಳ್ಳಬೇಕು ಎಂದರು.

ಸಮಾರಂಭವನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಜಿ. ಪುಂಡರೀಕ ಉದ್ಘಾಟಿಸಿದರು. ಚನ್ನಾಂಬಿಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಿಜಯ್‌ ರಾಂಪುರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ಎಚ್.ಪಿ. ನಂಜೇಗೌಡ ಮಾತನಾಡಿದರು. ಗಾಯಕರಾದ ಚೌ.ಪು. ಸ್ವಾಮಿ, ಬಿ. ವಿನಯ್‌ಕುಮಾರ್ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಚಿಂತಕ ಸು.ಚಿ. ಗಂಗಾಧರಯ್ಯ, ಸರ್ಕಾರಿ ಪಾಲಿಟೆಕ್ನಿಕ್‌ಪ್ರಾಚಾರ್ಯ ರಾಮಾಂಜನೇಯ, ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಜಿ. ಮಹೇಂದ್ರಮಣಿ, ಸಂಯೋಜಕಿ ತುಳಸಿಮಾಲಾ, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕಿ ಟಿ.ಕೆ. ಜ್ಯೋತಿ ಇದ್ದರು. ವಿದ್ಯಾರ್ಥಿನಿ ನವ್ಯಶ್ರೀ ಪ್ರಾರ್ಥಿಸಿದರು. ರಾಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.