ADVERTISEMENT

‘ಸರ್ಕಾರಿ ಆಡಳಿತ ಯಂತ್ರ ದುರ್ಬಳಕೆ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 10:05 IST
Last Updated 23 ಸೆಪ್ಟೆಂಬರ್ 2017, 10:05 IST

ರಾಮನಗರ: ‘ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನ್ಯಾಯಾಲಯ ಮತ್ತು ಪೊಲೀಸ್ ಸ್ಟೇಷನ್‌ಗಳು ಭ್ರಷ್ಟಾಚಾರದ ತಾಣಗಳಾಗಿ ಮಾರ್ಪಟ್ಟಿವೆ’ ಎಂದು ಜೆಡಿಎಸ್‌ ಕಾನೂನು ಘಟಕದ ರಾಜ್ಯ ಅಧ್ಯಕ್ಷ ಎ.ಪಿ. ರಂಗನಾಥ್‌ ಆರೋಪಿಸಿದರು.

‘ಸರ್ಕಾರ ಹಾಗೂ ಆಡಳಿತ ವರ್ಗದಿಂದ ಬೇಸತ್ತಿರುವ ಜನತೆ ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಪ್ರಾದೇಶೀಕ ಪಕ್ಷಗಳಿಂದ ಮಾತ್ರ ಜನಪರ ಸರ್ಕಾರ ನಡೆಸಲು ಸಾಧ್ಯ. ರಾಜ್ಯದಲ್ಲಿ ಬಡವರು ಮತ್ತು ಶೋಷಿತರ ಧ್ವನಿಯಾಗಿ ಕೆಲಸ ಮಾಡುವ ಹಂಬಲವನ್ನು ಹೊಂದಿರುವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ವಕೀಲರು ಕೈಜೋಡಿಸಬೇಕು’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ಪ್ರಸ್ತುತ ವಕೀಲರ ನಡುವೆ ಹಿರಿಯರು ಮತ್ತು ಕಿರಿಯರೆಂಬ ತಾರತಮ್ಯವಿದೆ. ಇದನ್ನು ನಿವಾರಿಸಲು ಮತ್ತು ಜಿಲ್ಲೆಯಲ್ಲಿ ಕೌಟುಂಬಿಕ ಮತ್ತು ಗ್ರಾಹಕ ನ್ಯಾಯಾಲಯಗಳ ಸ್ಥಾಪನೆ, ವಕೀಲರಿಗೆ ಆರೋಗ್ಯ ವಿಮೆ, ವಕೀಲರ ಶಿಷ್ಯ ವೇತನ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳನ್ನು ನಿವಾರಿಸಲು ಹೋರಾಟ ನಡೆಸಲಾಗುವುದು’ ಎಂದರು.

ADVERTISEMENT

ಜೆಡಿಎಸ್‌ ಕಾನೂನು ಜಿಲ್ಲಾ ಘಟಕದ ಅಧ್ಯಕ್ಷ ಟಿ.ಕೆ. ಶಾಂತಪ್ಪ ಮಾತನಾಡಿ ‘ರಾಷ್ಟ್ರೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಕೈ ತೋರಿಸಿಕೊಂಡು ರಾಜ್ಯದ ಜ್ವಲಂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಕಾವೇರಿ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕೆಸರೆರೆಚಾಟ ನಡೆಸುತ್ತಿದ್ದು ಒಂದು ಶತಮಾನ ಕಳೆದರು ಸಮಸ್ಯೆ ನೀಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಅನಿವಾರ್ಯವಾಗಿದೆ’ ಎಂದು ತಿಳಿಸಿದರು.

‘ರಾಮನಗರದ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಕಕ್ಷಿದಾರರಿಗೆ ವರ್ಷಕ್ಕೆ ಎರಡು ಬಾರಿ ಮಾತ್ರ ಪ್ರಕರಣದ ದಿನಾಂಕ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿವೆ’ ಎಂದರು.

ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಜಿಲ್ಲಾ ಉಪಾಧ್ಯಕ್ಷ ಹನುಮಂತೇಗೌಡ, ವಕೀಲರಾದ ಮಂಜೇಶ್‍ ಗೌಡ, ಪುಟ್ಟಸ್ವಾಮಿ, ಸುರೇಶ್, ಜಾದವ್, ಕನಕಪುರ ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ನಂಜೇಗೌಡ, ಪ್ರದೀಪ್‌ಕುಮಾರ್, ಗಿರೀಶ್, ಬಿ. ರಂಗನಾಥಪ್ಪ, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ಹಿಂದುಳಿದ ವರ್ಗದ ಅಧ್ಯಕ್ಷ ರೈಡ್ ನಾಗರಾಜ್, ಮುಖಂಡ ಎಸ್. ಆರ್. ರಾಮಕೃಷ್ಣಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಮಹದೇವ, ಕೋದಂಡರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.