ಕನಕಪುರ: ಗ್ರಾಮದಲ್ಲಿ ಹೆಚ್ಚಿನ ಹೈನುಗಾರಿಕೆ ಇರುವುದರಿಂದ ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಲು ಹಾಗೂ ರೈತನ ಅನುಕೂಲಕ್ಕಾಗಿ ಪ್ರಾಥಮಿಕ ಪಶು ಚಿಕಿತ್ಸಾಲಯದ ಕಟ್ಟಡವನ್ನು ನೂತನವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಕಸಬಾ ಹೋಬಳಿ ತುಂಗಣಿ ಗ್ರಾಮದಲ್ಲಿ ₹25.5 ಲಕ್ಷ ವೆಚ್ಚದ ನೂತನ ಕಟ್ಟಡ ಕಾಮಗಾರಿಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹೈನುಗಾರಿಕೆಯು ಹೆಚ್ಚು ಲಾಭದಾಯಕ ಉದ್ಯಮವಾಗಿದ್ದು ರೈತರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು, ಗ್ರಾಮದಲ್ಲಿ ಪ್ರಾಥಮಿಕ ಪಶು ಚಿಕಿತ್ಸಾಲಯವಿದ್ದು ಅದಕ್ಕೆ ಕಟ್ಟಡವಿರಲಿಲ್ಲ, ಪಶು ಸಂಗೋಪನಾ ಇಲಾಖೆಗೆ ತಾಲ್ಲೂಕಿನ 4 ಕಡೆ ಕಟ್ಟಡದ ಅವಶ್ಯಕತೆಯ ಬಗ್ಗೆ ಮನವಿ ಮಾಡಲಾಗಿತ್ತು ಎಂದರು.
ತುಂಗಣಿ, ದೊಡ್ಡಸಾದೇನಹಳ್ಳಿ, ಉಯ್ಯಂಬಳ್ಳಿ, ಕಬ್ಬಾಳು ಗ್ರಾಮಗಳಿಗೆ ಇಲಾಖೆಯು ಹಣ ಮಂಜೂರು ಮಾಡಿದ್ದು ನಿರ್ಮಿತಿ ಕೇಂದ್ರದವರು ಕಟ್ಟಡ ನಿರ್ಮಾಣ ಮಾಡಲಿದ್ದಾರೆ. ಗ್ರಾಮದವರು ಖುದ್ದು ನಿಂತು ಗುಣಮಟ್ಟದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಿಸಿಕೊಳ್ಳಬೇಕು ಎಂದರು.
ಗ್ರಾಮಸ್ಥರು ಮಾತನಾಡಿ ಗ್ರಾಮವು ಪಂಚಾಯಿತಿ ಕೇಂದ್ರ ಸ್ಥಾನವಾಗಿರುವುದರಿಂದ ಮತ್ತು ಹೆಚ್ಚು ಹೈನುಗಾರಿಕೆ ಹೊಂದಿರುವುದರಿಂದ ಪಶು ಚಿಕಿತ್ಸಾಲಯದ ಅವಶ್ಯಕತೆಯಿದ್ದು ಈಗಿರುವ ಪ್ರಾಥಮಿಕ ಪಶು ಚಿಕಿತ್ಸಾಲ ಮೇಲ್ದರ್ಜೆಗೆ ಏರಿಸಿ ಪಶು ವೈದ್ಯಾಧಿಕಾರಿಯನ್ನು ನೀಡಬೇಕೆಂದು ಮನವಿ ಮಾಡಿದರು.
ಸಂಸದರು ಸ್ಪಂದಿಸಿ ಪ್ರತಿವರ್ಷವು ರಾಜ್ಯದಲ್ಲಿ 500 ಪ್ರಾಥಮಿಕ ಪಶು ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು, ಮುಂದಿನ ಅವಧಿಯಲ್ಲಿ ಇಲ್ಲಿಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಇಲಾಖೆಯಲ್ಲಿ ಮಾತನಾಡುವುದಾಗಿ ತಿಳಿಸಿದರು.
ನಗರಸಭೆ ಅಧ್ಯಕ್ಷ ಕೆ.ಎನ್.ದಿಲೀಪ್, ಜಿಲ್ಲಾ ಪಂಚಾಯಿತಿ ಸದಸ್ಯೆ ಉಷಾರವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಯಸಂದ್ರರವಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ರಾಜ್ಯ ನಿರ್ದೇಶಕಿ ಸುಕನ್ಯರಂಗಸ್ವಾಮಿ, ತುಂಗಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುದ್ದೇಗೌಡ,
ಹಾಲಿನ ಡೈರಿ ಕಾರ್ಯದರ್ಶಿ ಸಂಘದ ಅಧ್ಯಕ್ಷ ಶಿವನಂಜಯ್ಯ, ರಾಮನಗರ ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ರಾಂಪುರ ನಾಗೇಶ್, ಮುಖಂಡರಾದ ಪಿ.ಎಲ್.ಡಿ.ದುರ್ಗಯ್ಯ, ಟಿ.ಸಿ.ರವಿ, ಪಟೇಲ್ ನಾಗರಾಜು, ರಂಗಸ್ವಾಮಿ, ವರಗೇರಹಳ್ಳಿ ಪಾರ್ಥ,
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ವರ್, ಕರವಸೂಲಿಗಾರ ಹರೀಶ್, ಪಶುಪಾಲನಾ ಮತ್ತು ಪಶುಚಿಕಿತ್ಸಾಲಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಲ್.ವರದರಾಜ್ಕುಮಾರ್, ಪಶು ವೈದ್ಯಾಧಿಕಾರಿ ಡಾ. ಶ್ರೀನಾಥ್, ಪಶು ವೈದ್ಯಕೀಯ ಪರೀಕ್ಷಕ ರವಿ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.