ರಾಮನಗರ: ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಹೂ–ಹಣ್ಣು ಖರೀದಿ ಹೆಚ್ಚಾಗಿತ್ತು.
ಸಂಪತ್ತಿನ ಸಂಕೇತವಾದ ಲಕ್ಷ್ಮಿಗೆ ಶುಕ್ರವಾರದಂದು ವಿಶೇಷ ಪೂಜೆ ಸಲ್ಲಿಸಿ, ಐಶ್ವರ್ಯ ವೃದ್ಧಿಗೆ ಬೇಡುವುದು ವಾಡಿಕೆ. ಅದರಂತೆ ಪೂಜೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಕೊಳ್ಳಲು ಜನರು ಮಾರುಕಟ್ಟೆಯತ್ತ ಹೆಜ್ಜೆ ಇಟ್ಟಿದ್ದರು. ಬೇಡಿಕೆ ಹೆಚ್ಚಾಗಿದ್ದ ಕಾರಣ ಸಹಜವಾಗಿಯೇ ಎಲ್ಲದರ ಬೆಲೆಯೂ ಹೆಚ್ಚಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಹೂವು ಬಲು ದುಬಾರಿಯಾಗಿತ್ತು. ಬೆಳಿಗ್ಗೆ ಎಪಿಎಂಸಿಯಲ್ಲಿನ ಮಾರುಕಟ್ಟೆಯಲ್ಲಿ ಸೇವಂತಿಗೆ ಒಂದು ಮಾರಿಗೆ ₨50–60ರಂತೆ ಮಾರಾಟವಾಯಿತು. ಅದೇ ಹೂವು ಹಳೆ ಬಸ್ ನಿಲ್ದಾಣದಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಾಹ್ನ ಮಾರಿಗೆ ₨80–90ರವರೆಗೂ ಬೆಲೆ ಏರಿಸಿಕೊಂಡಿತ್ತು. ಮಾರಾಟವಾಯಿತು. ಗುಲಾಬಿಯೂ ಬೆಲೆ ಏರಿಸಿಕೊಂಡಿತ್ತು. ಸೇವಂತಿಗೆ ಹಾರ ₨120–150ರವರೆಗೂ ಮಾರಾಟವಾಯಿತು. ಕಾಕಡ, ಗುಲಾಬಿ ಬೆಲೆಯೂ ಹೆಚ್ಚಿತ್ತು. ಕನಕಾಂಬರ ಮಾರುಕಟ್ಟೆಯಲ್ಲಿ ಅಪರೂಪವಾಗಿತ್ತು.
ಪೂಜೆಗೆ ಅವಶ್ಯವಾದ ಏಲಕ್ಕಿ ಬಾಳೆಯ ಬೆಲೆಯೂ ದಿಢೀರ್ ಏರಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಬಾಳೆ ₨80ರಂತೆ ಮಾರಾಟವಾಯಿತು. ಮಾಗಿದ ಹಣ್ಣು ಖಾಲಿಯಾಗಿದ್ದು, ಅರೆ ಮಾಗಿದ ಕಾಯಿಗಳನ್ನೇ ಜನರು ಕೊಂಡೊಯ್ದರು. ಪೂಜೆಗೆ ಅವಶ್ಯವಾದ ಬಾಳೆ ಕಂದು, ತೋರಣಕ್ಕೆ ಬೇಕಾದ ಮಾವಿನ ಎಲೆಗಳ ಖರೀದಿಯೂ ನಡೆದಿತ್ತು. ಹಣ್ಣಿನ ದರಗಳಲ್ಲೂ ಏರಿಕೆ ಕಂಡು ಬಂದಿತು.
‘ಎರಡು ದಿನದ ಹಿಂದಷ್ಟೇ ಎಲ್ಲದರ ಬೆಲೆ ಕಡಿಮೆ ಇತ್ತು. ಹಬ್ಬವಾದ್ದರಿಂದ ಹೂವಿನ ಬೆಲೆ ದುಪ್ಪಟ್ಟಾಗಿದೆ. ಎಲ್ಲಿ ಹುಡುಕಿದರೂ ಹಣ್ಣಾದ ಬಾಳೆ ಸಿಗುವುದು ಕಷ್ಟವಾಗಿದೆ’ ಎಂದು ಗ್ರಾಹಕರಾದ ಜಯಲಕ್ಷ್ಮಿ ಹೇಳಿದರು.
ಮಾರುಕಟ್ಟೆಯಲ್ಲಿ ಹಣ್ಣಿನ ದರ (ಪ್ರತಿ ಕೆ.ಜಿ.ಗೆ)
ಏಲಕ್ಕಿ ಬಾಳೆ– ₹80
ಸೇಬು – ₹140–150
ಕಿತ್ತಳೆ –₹100
ಪಚ್ಚೆ ಬಾಳೆ– ₹40–50
ದ್ರಾಕ್ಷಿ – ₹100
ಮೂಸಂಬಿ– ₹80
ದಾಳಿಂಬೆ– ₹10
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.