ADVERTISEMENT

‘ಜಾತಿ ವ್ಯವಸ್ಥೆ ಅಳಿಯದೇ ಅಭಿವೃದ್ಧಿ ಅಸಾಧ್ಯ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 6:05 IST
Last Updated 3 ಡಿಸೆಂಬರ್ 2017, 6:05 IST

ಸೊರಬ: ಜಾತಿವ್ಯವಸ್ಥೆ ಹಾಗೂ ಪುರೋಹಿತಶಾಹಿ ಧೋರಣೆಯನ್ನು ಕಿತ್ತು ಹಾಕುವವರೆಗೂ ನಾಡಿನ ಅಭಿವೃದ್ಧಿ ಸಾಧ್ಯವಿಲ್ಲ. ಪರಾವಲಂಬಿಗಳು ಸ್ವಾವಲಂಬಿಗಳನ್ನು ತುಳಿಯುತ್ತಿರುವುದನ್ನು ಪ್ರತಿಯೊಬ್ಬರೂ ವಿರೋಧಿಸಿದಾಗ ಮಾತ್ರ ಮನಷ್ಯತ್ವಕ್ಕೆ ಅರ್ಥ ಬರುತ್ತದೆ ಎಂದು ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು.

ಮಾನವ ಬಂಧುತ್ವ ವೇದಿಕೆ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಮೂಢನಂಬಿಕೆ ವಿರೋಧಿ ಪರಿವರ್ತನಾ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರಮಿಕ ವರ್ಗ ಎಲ್ಲಿಯವರೆಗೆ ದುಡಿದ ಹಣವನ್ನು ದೇವರು ಹಾಗೂ ಪುರೋಹಿತಶಾಹಿ ಧೋರಣೆಯವರಿಗೆ ಧಾರೆ ಎರೆಯದೆ ತಮ್ಮ ಕುಟುಂಬದ ಬೆಳವಣಿಗೆಗೆ ಬಳಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅಭಿವೃದ್ಧಿ ಸಾಧ್ಯವಿಲ್ಲ. ಜನರು ಭಾವನಾತ್ಮಕವಾಗಿ ದೇವರು, ಧರ್ಮದ ಹೆಸರಿನಲ್ಲಿ ವಂಚನೆಗೆ ಒಳಗಾಗದೇ ವೈಚಾರಿಕ ದೃಷ್ಟಿಕೋನದಲ್ಲಿ ಬದುಕು ಕಟ್ಟಿಕೊಳ್ಳುವ ಕಡೆಗೆ ಚಿಂತಿಸಬೇಕು ಎಂದರು.

ADVERTISEMENT

ಅಕ್ಷರಸ್ಥ ಮೂಢನಂಬಿಕಸ್ಥರಿಂದ ಸಮಾಜ ಅವನತಿಯ ಹಾದಿ ಹಿಡಿದಿದೆ. ಸರ್ಕಾರ ಮೌಢ್ಯ ನಿಷೇಧ ಕಾನೂನನ್ನು ತುರ್ತಾಗಿ ಜಾರಿಗೊಳಿಸಬೇಕು. ವಿಚಾರವಾದಿಗಳ ವೈಚಾರಿಕ ಸಿದ್ಧಾಂತಗಳನ್ನು ಹತ್ತಿಕ್ಕುವುದು ಖಂಡನೀಯ ಎಂದು ಹೇಳಿದರು.

ಡಾ.ಬಿ.ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಡಿ.6ರಂದು ಬೆಳಗಾವಿಯಲ್ಲಿ ನಡೆಯುವ ಮೌಢ್ಯ ವಿರೋಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮಾನವ ಬಂಧುತ್ವ ವೇದಿಕೆಯಿಂದ ಬ್ರಹ್ಮಶ್ರೀ ನಾರಾಯಣ ಗುರು ಕಲಾತಂಡದವರು ಜಾಥಾ ನಡೆಸುವ ಮೂಲಕ ಆಹ್ವಾನ ನೀಡಿದರು.

ಐರಣಿ ಚಂದ್ರು ದಾವಣಗೆರೆ, ರಾಜೇಶ್ ಪಡುಬಿದ್ರಿ, ಕೃಷ್ಣ ಬೆಳ್ತಂಗಡಿ, ಭೀಮೇಶ್ ಬೆಂಗಳೂರು, ಪ್ರಶಾಂತ್ ಬೆಳ್ತಂಗಡಿ, ಪರಶುರಾಮ್ ಜಗಳೂರು, ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.