ADVERTISEMENT

‘ಜೆಡಿಎಸ್‌ನತ್ತ ಜನರ ಒಲವು’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 10:21 IST
Last Updated 3 ಸೆಪ್ಟೆಂಬರ್ 2017, 10:21 IST
ಆರ್‌.ಮದನ್‌
ಆರ್‌.ಮದನ್‌   

ತೀರ್ಥಹಳ್ಳಿ: ‘ತೀರ್ಥಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ ಬಲಿಷ್ಠವಾಗಿದೆ. ಬೇರೆ ಬೇರೆ ಪಕ್ಷದವರು ಜೆಡಿಎಸ್‌ ಕಡೆಗೆ ಮುಖ ಮಾಡುತ್ತಿದ್ದಾರೆ’ ಎಂದು ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಮದನ್‌ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ನಾಯಕರು ತೀರ್ಥಹಳ್ಳಿ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ತಳೆದಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಗೆಲುವಿಗೆ ಕಾರ್ಯಕರ್ತರು ಪಣತೊಟ್ಟಿದ್ದಾರೆ’ ಎಂದು ತಿಳಿಸಿದರು.

‘ಶಾಸಕ ಕಿಮ್ಮನೆ ರತ್ನಾಕರ ₹ 1 ಸಾವಿರ ಕೋಟಿ ರೂಪಾಯಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿಪಡಿಸಿದ್ದೇನೆ’ ಎಂದು ಹೇಳುತ್ತಿದ್ದಾರೆ. ಎಲ್ಲೆಲ್ಲಿ ಅಭಿವೃದ್ಧಿಯಾಗಿದೆ ಎಂಬುದನ್ನು ಅವರು ಜನತೆಗೆ ತಿಳಿಸಲಿ. ಸಜ್ಜನ ರಾಜಕಾರಣಿ ಎಂದು ಹೇಳಿಕೊಳ್ಳುತ್ತಿರುವ ಶಾಸಕರು ವೈಯುಕ್ತಿಕ ಟೀಕೆಗೆ ಇಳಿದಿರುವುದು ದುರದೃಷ್ಟಕರ ಸಂಗತಿ. ತಾವು ಪ್ರತಿಕ್ರಿಯೆ ನೀಡದೇ, ಕಾಂಗ್ರೆಸ್‌ನ ಪದಾಧಿಕಾರಿಗಳ ಮೂಲಕ ಪತ್ರಿಕಾ ಹೇಳಿಕೆ ಕೊಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಜೆಡಿಎಸ್‌ ಜನಸಾಮಾನ್ಯರ ಪಕ್ಷ ಎಂಬುದು ಜನರಿಗೆ ಅರಿವಿದೆ. ಕ್ಷೇತ್ರದಲ್ಲಿ ಬಡವರ ಕೆಲಸ ಆಗುತ್ತಿಲ್ಲ. ಬಡವರಿಗೆ ಮರಳು ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಮುಖ್ಯ ರಸ್ತೆಯನ್ನು ಹೊರತಾಗಿ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿ ಹೊಂದಿಲ್ಲ. ತಾಲ್ಲೂಕು ಕಚೇರಿಯಲ್ಲಿ ಜನಸಾಮಾನ್ಯರ ಕೆಲಸ ಆಗುತ್ತಿಲ್ಲ ಎಂದು ಅವರು ದೂರಿದರು.

‘ವೀರಪ್ಪನ್‌ ಪ್ರಕರಣದಲ್ಲಿ ನಾನು ಹಣ ಪಡೆದಿರುವ ಕುರಿತು ಆರೋಪಿಸಿರುವ ಕಿಮ್ಮನೆ ಅವರು ಸಾಬೀತುಪಡಿಸಲಿ. ಇಲ್ಲದಿದ್ದರೆ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗುವುದು’ ಎಂದು ಅವರು ಸವಾಲು ಹಾಕಿದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಅಡ್ಡಗುಡ್ಡೆ ಮಹೇಶ್‌ ನಾಯ್ಕ, ತಾಲ್ಲೂಕು ಕಾರ್ಯಾಧ್ಯಕ್ಷ ಕಿರಣ್‌ ಪ್ರಭಾಕರ್‌, ಮಹಿಳಾ ಘಟಕದ ಅಧ್ಯಕ್ಷೆ ವಿನಂತಿ ಎಸ್‌.ಕರ್ಕಿ, ಯುವ ಘಟಕದ ಅಧ್ಯಕ್ಷ ಯಡೂರು ಸುರೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.