ಸೊರಬ: ದಕ್ಷಿಣ ಭಾರತದಲ್ಲಿ ಮತಾಂಧತೆ ಮತ್ತು ಭಯೋತ್ಪಾದನೆಗೆ ಮೂಲ ಕಾರಣ ಟಿಪ್ಪು ಸುಲ್ತಾನ್ ಹಾಗೂ ಹೈದರ್ ಆಲಿ, ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಬಾರದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಕಾರ್ಯಕರ್ತರು ಮಂಗಳವಾರ ಬೈಕ್ ರ್ಯಾಲಿ ಮೂಲಕ ಪ್ರತಿಭಟಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಯುವ ಜನತೆಗೆ ಮಾದರಿಯಾಗಿರುವ ದಾರ್ಶನಿಕರ ಜಯಂತಿ ಆಚರಣೆಗೆ ಆದ್ಯತೆ ನೀಡಬೇಕೆ ಹೊರತು ವಿವಾದಾತ್ಮಕ ಚರಿತ್ರೆ ಹೊಂದಿರುವ ಟಿಪ್ಪು ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವುದು ಸರಿಯಲ್ಲ. ಆಡಳಿತದ ಅವಧಿಯಲ್ಲಿ ಟಿಪ್ಪು ಒಳ್ಳೆಯ ಕೆಲಸಕ್ಕಿಂತ ಹೆಚ್ಚಾಗಿ ಕೊಲೆ ಸುಲಿಗೆ ಮಾಡಿದ್ದಾನೆ. ಸರ್ಕಾರ ಜಯಂತಿ ಆಚರಣೆ ಮಾಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಒಬ್ಬ ರಾಜ ಸಾಮ್ರಾಜ್ಯ ವಿಸ್ತರಣೆಗಾಗಿ ಎದುರಾಳಿಗಳ ವಿರುದ್ಧ ಯುದ್ಧ ಮಾಡುವುದು ಸಹಜ. ಆದರೆ ಯುದ್ಧದ ನಂತರ ಪ್ರಜೆಗಳ ಮೇಲೆ ಅತ್ಯಾಚಾರ, ಮತಾಂತರ ಹಾಗೂ ಹಿಂದೂ ದೇವಸ್ಥಾನಗಳನ್ನು ನಾಶಪಡಿಸಿದ್ದಾನೆ. ಅಲ್ಲದೇ ಮೇಲುಕೋಟೆ, ಕಲ್ಲಿಕೋಟೆ, ಕೊಡಗು ಹಾಗೂ ಮಂಗಳೂರಿನಲ್ಲಿ ಆತ ನಡೆಸಿದ ಕೌರ್ಯ ಮತ್ತು ನರ ಹತ್ಯೆಗಳು ಮಾನವ ವಿರೋಧಿಯಾಗಿದ್ದು, ಇಂತಹ ಅರ್ಧಮೀಯ ಹಾಗೂ ಮತೀಯ ಧೋರಣೆ ಹೊಂದಿರುವ ಟಿಪ್ಪು ಜಯಂತಿ ಆಚರಣೆ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜ ಸುಧಾರಣೆಗಾಗಿ ದುಡಿದ ಸಂತ ಕಬೀರರು, ಅಬ್ದುಲ್ ಕಲಾಂ ಅಜಾದ್, ಬಿಸ್ಮಿಲ್ ಖಾನ್, ಅಬ್ದುಲ್ ಗಫಾರ್ ಖಾನ್, ಅಬ್ದುಲ್ ಕಲಾಂ, ಕರೀಂ ಖಾನ್, ಅಸ್ಪಾಖ್ ಉಲ್ಲಾಖಾನ್ ಅವರಂತಹ ಶ್ರೇಷ್ಠರ ಜನ್ಮ ದಿನಾಚರಣೆ ಆಚರಿಸುವುದು ಮುಖ್ಯವಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ದಯಾನಂದ ಆಚಾರ್, ಮಹೀಪಾಲ್, ರವಿಗುಡಿಗಾರ್, ಪ್ರಸನ್ನ,ರಜನಿ ನಾಯಕ್, ಶಶಿಕುಮಾರ್, ಚಂದು, ಶ್ರೀಧರ್ ಕಾರ್ತಿಕ್, ಶರತ್, ಚಂದು,ದೀಪು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.