ADVERTISEMENT

ಪ್ರತಾಪ ಸಿಂಹ ಬಂಧನಕ್ಕೆ ಜೆಡಿಎಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 9:22 IST
Last Updated 6 ಡಿಸೆಂಬರ್ 2017, 9:22 IST

ಶಿವಮೊಗ್ಗ: ಸಂಸದ ಪ್ರತಾಪ ಸಿಂಹ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಯುವ ಜನತಾ ದಳ ಕಾರ್ಯಕರ್ತತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಹುಣಸೂರಿನಲ್ಲಿ ಈಚೆಗೆ ನಡೆದ ಹನುಮಭಕ್ತರ ಪಾದಯಾತ್ರೆ ವೇಳೆ ಪ್ರತಾಪ ಸಿಂಹ ಅವರು ಬ್ಯಾರಿಕೇಡ್ ಮೇಲೆ ವಾಹನ ನುಗ್ಗಿಸಿ, ಪೊಲೀಸರನ್ನು ಗಾಯಗೊಳಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಜನಪ್ರತಿನಿಧಿಯ ಗೂಂಡಾಗಿರಿ ವರ್ತನೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ಸಂಘರ್ಷ ಹುಟ್ಟುಹಾಕಲಾಗುತ್ತಿದೆ. ಬಿಜೆಪಿ ಮುಖಂಡರು ವೋಟ್‌ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ತುಮಕೂರು ವರದಿಗಾರನ ಮೇಲಿನ ಹಲ್ಲೆ ಇದಕ್ಕೆ ಸಾಕ್ಷಿ ಎಂದು ದೂರಿದರು.

ADVERTISEMENT

ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಬಿಡುಗಡೆ ಮಾಡಿರುವ ವಿಡಿಯೊ ಒಂದರಲ್ಲಿ ಮಾಹಿತಿ ಇದೆ. ಇದು ಆಘಾತಕಾರಿ ವಿಚಾರ. ವಿಡಿಯೊ ಆಧಾರದ ಮೇಲೆ ಪ್ರತಾಪ್ ಸಿಂಹ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಮೇಯರ್ ಎನ್‌.ಏಳುಮಲೈ, ಜಿ.ಡಿ.ಮಂಜುನಾಥ್, ಪಾಲಿಕೆ ಸದಸ್ಯ ಎಚ್.ಫಾಲಾಕ್ಷಿ, ವಿನ್ಸೆಂಟ್, ನರಸಿಂಹ, ಎನ್.ಎಸ್.ಆನಂದ್, ಹರೀಶ್ ಠಾಕೂರ್, ಎನ್.ಕೃಷ್ಣಕುಮಾರ್, ಶ್ಯಾಮ್, ವಿನಯ್, ಮಹಮ್ಮದ್ ಗೌಸ್, ರವಿಕುಮಾರ್, ಅನಿಲ್, ರಾಘವೇಂದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.