ADVERTISEMENT

ಬರ ನೀಗಿಸಲು ಮಳೆ ನೀರು ಸಂಗ್ರಹ ಅವಶ್ಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 8:55 IST
Last Updated 17 ಜುಲೈ 2017, 8:55 IST

ಸಾಗರ: ನೀರಿನ ಬರ ಎದುರಿಸಲು ಮಳೆ ನೀರು ಸಂಗ್ರಹ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಬೆಂಗಳೂರಿನ ಜಲ ಸಂರಕ್ಷಣಾ ತಜ್ಞ ಎ.ಆರ್. ಶಿವಕುಮಾರ್ ಹೇಳಿದರು. ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಭಾನುವಾರ ಕೆ.ವಿ. ಸುಬ್ಬಣ್ಣ ಸ್ಮರಣೆ ಅಂಗವಾಗಿ ನೀನಾಸಂ ಸಂಸ್ಥೆ ಏರ್ಪಡಿಸಿದ್ದ ‘ನೀರಿನ ಬಿಕ್ಕಟ್ಟನ್ನು ಮೀರುವ ದಾರಿಗಳು’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಅಂಕಿ–ಅಂಶಗಳ ಪ್ರಕಾರ ಇಂದಿಗೂ ನಮ್ಮಲ್ಲಿ ಮಳೆಯ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಆದರೆ, ಯಾವ ಸಮಯದಲ್ಲಿ, ಎಲ್ಲಿ ಎಷ್ಟು ಮಳೆಯಾಗ ಬೇಕೊ ಅಷ್ಟು ಪ್ರಮಾಣದಲ್ಲಿ ಮಳೆ ಆಗುತ್ತಿಲ್ಲ. ಈ ರೀತಿಯ ಮಳೆಯ ಅಸಮಾನ ಹಂಚಿಕೆ ಮತ್ತು ಅಕಾಲಿಕತೆಯೇ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

ಭೂಮಿಯಲ್ಲಿ ನೀರು ಇಂಗುವಂತೆ ಮಾಡಿದರೆ ನೀರಿನ ಕೊರತೆಯನ್ನು ನಿವಾರಿಸಿಕೊಳ್ಳಲು ಸಾಧ್ಯ. ಮಳೆಯ ನೀರಿಗಿಂತ ಶುದ್ಧ ನೀರು ಮತ್ತೊಂದಿಲ್ಲ. ಆದರೆ, ಅದನ್ನು ಇಂಗಿಸುವ ಕೆಲಸಕ್ಕೆ ನಾವು ಆಸಕ್ತಿ ತೋರುತ್ತಿಲ್ಲ. ಮಳೆ ನೀರು ಸಂಗ್ರಹ ಮೂಲಕ ನೀರು ಇಂಗಿಸುವ ಕೆಲಸ ಸಾಮೂಹಿಕವಾಗಿ ನಡೆಯಬೇಕಿದೆ ಎಂದು ಹೇಳಿದರು.

ADVERTISEMENT

ಕೆರೆಕಟ್ಟೆ, ಬಾವಿಗಳಲ್ಲಿರುವ ನೀರನ್ನು ಉಳಿತಾಯ ಖಾತೆಗೆ ಹೋಲಿಸ ಬಹುದಾದರೆ ಕೊಳವೆಬಾಯಿಯ ನೀರನ್ನು ನಿಶ್ಚಿತ ಅವಧಿಯ ಠೇವಣಿಗೆ ಹೋಲಿಸಬಹುದು. ನೀರಿಗಾಗಿ ಭೂಮಿಯ ಆಳಕ್ಕೆ ಹೋದಷ್ಟು ನೀರು ಶುದ್ಧವಾಗಿರುತ್ತದೆ ಎಂದು ನಿರೀಕ್ಷಿಸಲಾಗದು. ಈ ಕಾರಣಕ್ಕಾಗಿ ಕೊಳವೆಬಾವಿಯ ನೀರಿನ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಮಳೆ ನೀರು ಸಂಗ್ರಹ ಮಾಡುವ ಕೆಲಸವನ್ನು ನಮ್ಮ ಮನೆಗಳ ಜತೆಗೆ ಸರ್ಕಾರಿ ಕಚೇರಿ, ಶಾಲಾ ಕಟ್ಟಡಗಳ ಕಚೇರಿಗಳಿಗೂ ವಿಸ್ತರಿಸಬಹುದು. ಶಾಲಾ ಕಟ್ಟಡಗಳಿಗೆ ಈ ಯೋಜನೆ ಅಳವಡಿಸುವುದರಿಂದ ಮಕ್ಕಳಲ್ಲಿ ಜಲಜಾಗೃತಿ ಉಂಟಾಗುತ್ತದೆ. ನೀರು ಎಲ್ಲಿ ಬೀಳುತ್ತದೆಯೊ ಅಲ್ಲಿಯೇ ಇಂಗುವಂತಾಗುವುದು ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಅಭಿಪ್ರಾಯಪಟ್ಟರು.

‘ನೀರನ್ನು ಉತ್ಪಾದಿಸುವ ಕಾರ್ಖಾನೆಯನ್ನು ತೆರೆಯಲು ಸಾಧ್ಯವಿಲ್ಲ. ಮಳೆಯ ನೀರೇ ನಮಗೆ ಆಧಾರ. ಇರುವ ನೀರನ್ನೇ ಸಮರ್ಪಕವಾಗಿ ನಿರ್ವಹಣೆ ಮಾಡುವ ವಿಧಾನವನ್ನು ಕಂಡುಕೊಳ್ಳದೆ ಬೇರೆ ದಾರಿ ಇಲ್ಲ. ಮಳೆ ನೀರು ಸಂಗ್ರಹ, ಇಂಗುಗುಂಡಿ, ಜಲ ಮರುಪೂರಣ ಇವೇ ಮೊದಲಾದ ಮಾರ್ಗಗಳನ್ನು ಅನುಸರಿಸುವುದು ಅನಿವಾರ್ಯ ಎಂದು ಹೇಳಿದರು.

ರೈತ ಮುಖಂಡ ಕಡಿದಾಳು ಶಾಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ವಿಮರ್ಶಕ ಟಿ.ಪಿ.ಅಶೋಕ್, ಕೆ.ವಿ.ಅಕ್ಷರ, ಬಿ.ಆರ್.ವೆಂಕಟರಮಣ ಐತಾಳ್, ಜಿ.ಎಸ್.ಚಂದ್ರಶೇಖರ್ ಅವರೂ ಹಾಜರಿದ್ದರು. ಸಂವಾದ ನಡೆಯಿತು. ನಂತರ ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ಬಳಗದಿಂದ ಮಂಜುನಾಥ ಎಲ್.ಬಡಿಗೇರ ಅವರ ನಿರ್ದೇಶನದಲ್ಲಿ ‘ತಾಟಕೀ ಮರ್ದನ’ ನಾಟಕ ಪ್ರದರ್ಶನಗೊಂಡಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.